

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಘನಘೋರ ಕೃತ್ಯ ನಡೆದಿದ್ದು, ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಮದುವೆ ಮನೆ ಕ್ಷಣಾರ್ಧದಲ್ಲಿ ಸ್ಮಶಾನ ಸದೃಶವಾಗಿದೆ.
ಬಳ್ಳಾರಿಯ ಸಮತಾ ನಗರದಲ್ಲಿ ಈ ಭೀಕರ ಕೊಲೆ ನಡೆದಿದ್ದು, ಕೊಲೆಯಾದ ಯುವಕನನ್ನು ಸ್ಥಳೀಯ ಬೋಟಿ ಮಾರ್ಕೆಟ್ ಹಾಗೂ ಗಾರೆ ಕೆಲಸ ಮಾಡುತ್ತಿದ್ದ ನಬಿ ರಸೂಲ್ ಎಂದು ಗುರುತಿಸಲಾಗಿದೆ.
15 ದಿನಗಳ ಹಿಂದಷ್ಟೇ ವಿಚ್ಛೇದನ ಪಡೆದಿದ್ದ ಯುವತಿಯನ್ನು ನಬಿ ರಸೂಲ್ ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನು ಒಪ್ಪಿದ ಎರಡೂ ಕುಟುಂಬಸ್ಥರು ಗುರುವಾರವಷ್ಟೇ ಅತ್ಯಂತ ಸಡಗರದಿಂದ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಆರತಕ್ಷತೆಯ ಸಡಗರ ಮುಗಿಸಿ ರಾತ್ರಿ ಸುಮಾರು 11:30ರ ವೇಳೆಗೆ ನಬಿ ರಸೂಲ್ ಮನೆಯಲ್ಲಿದ್ದಾಗ ಆತನ ಮೊಬೈಲ್ಗೆ ಸ್ನೇಹಿತನೊಬ್ಬನಿಂದ ಕರೆ ಬಂದಿದೆ. ಸ್ನೇಹಿತ ಕರೆಯುತ್ತಿದ್ದಾನೆ, ಮಾತನಾಡಿಕೊಂಡು ಬರುತ್ತೇನೆ ಎಂದು ಪತ್ನಿಗೆ ಹೇಳಿ ಮನೆಯಿಂದ ಹೊರಟ ನಬಿ, ಮರಳಿ ಮನೆಗೆ ಬರಲೇ ಇಲ್ಲ.
ಇತ್ತ ಪತಿಗಾಗಿ ನವವಧು ಹಾಗೂ ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದಾಗಲೇ ತಡರಾತ್ರಿ 2 ಗಂಟೆಯ ಸುಮಾರಿಗೆ ಬರಸಿಡಿಲಿನಂತಹ ಸುದ್ದಿಯೊಂದು ಬಂದಿದೆ.
ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿದೆ. ಇಡೀ ದಿನ ಸಂತೋಷದಿಂದ ಕಂಗೊಳಿಸುತ್ತಿದ್ದ ಮನೆಯಲ್ಲಿ ಮದುಮಗ ಕೊಲೆಯಾಗಿರುವುದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್ಪಿ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರೀತಿ-ಮದುವೆಯ ಹಿನ್ನೆಲೆಯಲ್ಲೇ ಈ ಹತ್ಯೆ ನಡೆದಿದೆಯೇ ಅಥವಾ ಹಳೆಯ ವೈಷಮ್ಯ ಕಾರಣವೇ ಎಂಬ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.