'ಬೇರೊಬ್ಬ ಹುಡುಗನಿಗೆ ಸಂದೇಶ'; ಅಪ್ರಾಪ್ತ ಲಿವ್ ಇನ್ ಸಂಗಾತಿಯನ್ನು ಕೊಂದು ಹೂತುಹಾಕಿದ್ದ 16 ವರ್ಷದ ಬಾಲಕ ಸೇರಿ ಮೂವರ ಬಂಧನ!

ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ, ಆರೋಪಿಯು ಇತರ ಇಬ್ಬರೊಂದಿಗೆ ಸೇರಿ ಆಕೆಯ ಮೃತದೇಹವನ್ನು ತಮ್ಮ ಕೃಷಿ ಜಮೀನಿನಲ್ಲಿ ಹೂತುಹಾಕಿದ್ದನು.
Representative Image
Photo | ANI
Updated on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬ ಹುಡುಗನಿಗೆ ಸಂದೇಶ ಕಳುಹಿಸುತ್ತಿರುವುದನ್ನು ಗಮನಿಸಿದ ಅಪ್ರಾಪ್ತ ಬಾಲಕನೊಬ್ಬ ಜುಲೈ 10 ರಂದು ತನ್ನ ಲಿವ್ ಇನ್ ಪಾರ್ಟ್ನರ್ ಆಗಿದ್ದ 16 ವರ್ಷದ ಬಾಲಕಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.

ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ, ಆರೋಪಿಯು ಇತರ ಇಬ್ಬರೊಂದಿಗೆ ಸೇರಿ ಆಕೆಯ ಮೃತದೇಹವನ್ನು ತಮ್ಮ ಕೃಷಿ ಜಮೀನಿನಲ್ಲಿ ಹೂತುಹಾಕಿದ್ದನು. ಈ ಸಂಬಂಧ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಲನಾಥ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಯುವತಿಯ ಪೋಷಕರು ನಾಪತ್ತೆ ದೂರು ನೀಡಿದ ನಂತರ ಪೊಲೀಸರು ಆರೋಪಿಗಳ ಮನೆಗೆ ಭೇಟಿ ನೀಡಿದಾಗ, ಕೊಲೆ ನಡೆದು ಒಂದು ವಾರದ ಬಳಿಕ ಶುಕ್ರವಾರದಂದು ಈ ಅಪರಾಧ ಬೆಳಕಿಗೆ ಬಂದಿದೆ.

ಸಾತನೂರಿನ ವೆಂಕಟರಾಯದೊಡ್ಡಿಯ ನಿವಾಸಿಯಾಗಿದ್ದ ಸಂತ್ರಸ್ತೆ 9ನೇ ತರಗತಿಯಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಆರೋಪಿಯು 16 ವರ್ಷದವನಾಗಿದ್ದು, ಆತನೂ ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟವನಾಗಿದ್ದಾನೆ. ಬಂಧಿತರಾದ ಇತರ ಇಬ್ಬರನ್ನು ಆರೋಪಿ ಬಾಲಕನ ಸಹೋದರ ಪುಟ್ಟಮಾದ (19) ಮತ್ತು ಚಿಕ್ಕಪ್ಪ ಹರೀಶ್ (40) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೆಂಪಲನಾಥ ಗ್ರಾಮದ ನಿವಾಸಿಗಳಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ.

ಪೊಲೀಸರ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಂತರ ಈ ಇಬ್ಬರು ಅಪ್ರಾಪ್ತರು ಪ್ರೇಮದಲ್ಲಿ ಬಿದ್ದಿದ್ದರು. ಆ ಹುಡುಗಿ ಹಳ್ಳಿಯಲ್ಲಿರುವ ಹುಡುಗನ ಪೋಷಕರ ಮನೆಯ ಪಕ್ಕದ ಕೋಣೆಯೊಂದರಲ್ಲಿ ಸುಮಾರು ಒಂದು ತಿಂಗಳ ಕಾಲ ಆತನೊಂದಿಗೆ ವಾಸಿಸುತ್ತಿದ್ದಳು. ಹುಡುಗನ ಪೋಷಕರಿಗೆ ಅವರ ಸಂಬಂಧದ ಬಗ್ಗೆ ತಿಳಿದಿತ್ತು.

Representative Image
ಬೆಂಗಳೂರು: 20 ವರ್ಷದ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಕೊಲೆ; ಹಾಸನ ಮೂಲದ ಚಾಲಕ ಅಂದರ್!

ಜುಲೈ 10 ರಂದು, ಆ ಹುಡುಗಿ ಇನ್‌ಸ್ಟಾಗ್ರಾಂನಲ್ಲಿ ಮತ್ತೊಬ್ಬ ಹುಡುಗನೊಂದಿಗೆ ಮಾತನಾಡುತ್ತಿರುವುದನ್ನು ಹುಡುಗ ಗಮನಿಸಿದ್ದಾನೆ. ಇದರಿಂದ ಕೋಪಗೊಂಡು ಆಕೆಯೊಂದಿಗೆ ಜಗಳವಾಡಿ, ಹಲ್ಲೆ ನಡೆಸಿದ್ದಾನೆ. ಬಳಿಕ ಹಳೆಯ ನಾಡ ಬಂದೂಕಿನಿಂದ ಆಕೆಯ ಮುಖಕ್ಕೆ ಗುಂಡಿಕ್ಕಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆರೋಪಿ ತನ್ನ ಹಿರಿಯ ಸಹೋದರ ಹಾಗೂ ಚಿಕ್ಕಪ್ಪನಿಗೆ ಕರೆ ಮಾಡಿದ್ದಾನೆ; ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಅವರೆಲ್ಲರೂ ಸೇರಿ ಆಕೆಯ ಮೃತದೇಹವನ್ನು ತಮ್ಮ ಕೃಷಿ ಜಮೀನಿನಲ್ಲಿ ಹೂತುಹಾಕಿದ್ದಾರೆ.

ಆ ಬಂದೂಕು ಅಪ್ರಾಪ್ತ ಆರೋಪಿಯ ಅಜ್ಜನಿಗೆ ಸೇರಿದ್ದಾಗಿದ್ದು, ಅದನ್ನು ಹಿಂದೆ ಬೇಟೆಗಾಗಿ ಬಳಸಲಾಗುತ್ತಿತ್ತು ಎಂಬ ನಂಬಿಕೆಯಿಂದ ಕುಟುಂಬವು ಅದನ್ನು ಕಾನೂನುಬಾಹಿರವಾಗಿ ಇಟ್ಟುಕೊಂಡಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಹರೀಶ್ ತನ್ನ ಸ್ನೇಹಿತನೊಬ್ಬನೊಂದಿಗೆ ಕೊಲೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯವು ಶೀಘ್ರದಲ್ಲೇ ಊರಿನಲ್ಲಿ ವದಂತಿಯ ರೂಪದಲ್ಲಿ ಹರಡಿ, ಅಂತಿಮವಾಗಿ ಯುವತಿಯ ಪೋಷಕರ ಕಿವಿಗೆ ತಲುಪಿತು; ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಅವರು ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ತಾನು ಸ್ನೇಹಿತೆಯೊಬ್ಬಳ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಆಕೆ ತನ್ನ ಪೋಷಕರಿಗೆ ತಿಳಿಸಿದ್ದಳು. ಆಕೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು ಮತ್ತು ಇತ್ತೀಚೆಗಷ್ಟೇ ಶೀಘ್ರದಲ್ಲೇ ಮನೆಗೆ ಮರಳುವುದಾಗಿ ಹೇಳಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದರು.

'ಆಕೆ ಎಲ್ಲಿದ್ದಾಳೆ ಎಂದು ಪ್ರಶ್ನಿಸದಿರುವುದು ಅಥವಾ ಆಕೆ ಎಲ್ಲಿ ಉಳಿದುಕೊಂಡಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಳ್ಳದಿರುವುದು ಸೇರಿದಂತೆ, ಆಕೆಯ ಪೋಷಕರ ನಿರ್ಲಕ್ಷ್ಯವೂ ಈ ಘಟನೆಗೆ ಕಾರಣವಾಗಿದೆ. ಅವರಿಗೆ ಆಕೆಯ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲವೆಂದು ತೋರುತ್ತದೆ' ಎಂದು ಪೊಲೀಸರು ತಿಳಿಸಿದರು.

ಕೊಲೆಗೆ ಸಂಬಂಧಿಸಿದಂತೆ ಆರೋಪಿ ಬಾಲಕ ಹಾಗೂ ಆತನ ಕುಟುಂಬದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋಡಿಹಳ್ಳಿ ಪೊಲೀಸರು ಕೊಲೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಬಾಲಕಿಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು. ಪೊಲೀಸರು ಕೊಲೆಗೆ ಬಳಸಿದ ಸ್ಥಳೀಯವಾಗಿ ತಯಾರಿಸಿದ ಬಂದೂಕನ್ನು ಕೂಡ ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com