SIR ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆದ್ರೆ ಪೌರತ್ವ ಕಳೆದುಕೊಳ್ಳುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

SIR ಪ್ರಕ್ರಿಯೆಯಿಂದ ಹೊರಗಿಡಲಾದ ವ್ಯಕ್ತಿಗಳ ಮೇಲ್ಮನವಿ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಕೋರಿ ಪ್ರಸೇನ್‌ಜಿತ್ ಬೋಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.
Deletion from SIR rolls not loss of citizenship says Supreme Court
ಸುಪ್ರೀಂ ಕೋರ್ಟ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (ಸಂಗ್ರಹ ಚಿತ್ರ)TNIE
Updated on

ನವದೆಹಲಿ: ವಿಶೇಷ ತೀವ್ರ ಮರುಪರಿಶೀಲನೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಲ್ಪಟ್ಟ ಮಾತ್ರಕ್ಕೆ ವ್ಯಕ್ತಿಯ ಭಾರತೀಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು, SIR ಪ್ರಕ್ರಿಯೆಯಿಂದ ಹೊರಗಿಡಲಾದ ವ್ಯಕ್ತಿಗಳ ಮೇಲ್ಮನವಿ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಕೋರಿ ಪ್ರಸೇನ್‌ಜಿತ್ ಬೋಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

"ಈ ವಿಚಾರದ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಬಿಹಾರ SIR ಪ್ರಕರಣದ ತೀರ್ಪಿನಲ್ಲಿ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಚುನಾವಣಾ ಆಯೋಗಕ್ಕೆ (ECI) ಇದರಲ್ಲಿ ಸಮಾನ ಜವಾಬ್ದಾರಿ ಇದೆ. ಯಾರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ನಿರ್ಧಾರ ಕೈಗೊಂಡ ತಕ್ಷಣವೇ, ಪೌರತ್ವ ಕಾಯ್ದೆಯಡಿ ಅಂತಿಮ ನಿರ್ಧಾರಕ್ಕಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಕರಣವನ್ನು ಕಳುಹಿಸಬೇಕು. ಆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವ್ಯಕ್ತಿಯ ಪೌರತ್ವದ ಸ್ಥಾನಮಾನ ಮುಂದುವರಿಯುತ್ತದೆ," ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹೇಳಿದರು.

Deletion from SIR rolls not loss of citizenship says Supreme Court
'ಅಖಿಲ ಭಾರತ ಮಾಧ್ಯಮ ಸಮ್ಮೇಳನ 2026: SIR ಕಾಲಕ್ಕೆ ತಕ್ಕಂತೆ ಬದಲಾಗುವ ಜೀವಂತ ದಾಖಲೆ- CEC ಜ್ಞಾನೇಶ್ ಕುಮಾರ್

34 ಲಕ್ಷ ಮೇಲ್ಮನವಿಗಳು ಬಾಕಿ

ಈ ನಡುವೆ ಪ್ರಸ್ತುತ 19 ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಸುಮಾರು 34 ಲಕ್ಷ ಮೇಲ್ಮನವಿಗಳು ಬಾಕಿ ಉಳಿದಿದ್ದು, ಇಬ್ಬರು ನ್ಯಾಯಮೂರ್ತಿಗಳು ರಾಜೀನಾಮೆ ನೀಡಿರುವುದರಿಂದ ಪ್ರಕರಣಗಳ ವಿಲೇವಾರಿ ಇನ್ನಷ್ಟು ವಿಳಂಬವಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ನ್ಯಾಯಾಲಯದ ಗಮನಕ್ಕೆ ತಂದರು.

ಇದುವರೆಗೆ ಕೇವಲ 38 ಸಾವಿರ ಮೇಲ್ಮನವಿಗಳಷ್ಟೇ ವಿಲೇವಾರಿಯಾಗಿದ್ದು, ಅವುಗಳಲ್ಲಿ ಸುಮಾರು ಶೇ.70 ಅರ್ಜಿಗಳಿಗೆ ಅನುಕೂಲಕರ ತೀರ್ಪು ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರಿ ಸೌಲಭ್ಯಗಳಿಂದ ವಂಚನೆ

ಅಂತೆಯೇ ಮೇಲ್ಮನವಿಗಳು ಬಾಕಿ ಇರುವ ಅವಧಿಯಲ್ಲಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ (PDS), ಅನ್ನಪೂರ್ಣ ಯೋಜನೆ ಹಾಗೂ ಜಾತಿ ಪ್ರಮಾಣಪತ್ರಗಳಂತಹ ಸರ್ಕಾರಿ ಸೌಲಭ್ಯಗಳನ್ನು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸುತ್ತಿದೆ ಎಂದು ಹಿರಿಯ ವಕೀಲರು ವಾದಿಸಿದರು.

"ನೆಲಮಟ್ಟದಲ್ಲಿ ಇಂತಹವರಿಗೆ ಪೌರತ್ವಕ್ಕೆ ಸಂಬಂಧಿಸಿದ ಅನೇಕ ಹಕ್ಕುಗಳು ಮತ್ತು ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ. 34 ಲಕ್ಷ ಮೇಲ್ಮನವಿಗಳು ಬಾಕಿ ಇರುವಾಗ ಕೇವಲ 38 ಸಾವಿರ ಪ್ರಕರಣಗಳಷ್ಟೇ ಇತ್ಯರ್ಥಗೊಂಡಿವೆ. ಉಳಿದ ಲಕ್ಷಾಂತರ ಜನರು ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ ಈ ವಂಚನೆಯನ್ನು ಅನುಭವಿಸಬೇಕಾಗುತ್ತದೆ," ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

Deletion from SIR rolls not loss of citizenship says Supreme Court
ಕರ್ನಾಟಕ SIR ಅವಧಿ ವಿಸ್ತರಣೆ: BLO ಮನೆಮನೆ ಭೇಟಿಗೆ ಆಗಸ್ಟ್ 8 ಕೊನೆ ದಿನ; 17ರಂದು ಕರಡು ಪಟ್ಟಿ ಪ್ರಕಟಣೆ!

ಪೌರತ್ವ ನಿರ್ಧರಿಸುವ ಅಧಿಕಾರ ECIಗೆ ಇಲ್ಲ: ಸುಪ್ರೀಂ

ಈ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಬಾಗ್ಚಿ, ಭಾರತ ಸಂವಿಧಾನದ 9, 10, 11 ಮತ್ತು 12ನೇ ವಿಧಿಗಳ ಪ್ರಕಾರ ಪೌರತ್ವ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

"ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ನಿರ್ವಹಿಸುವ ಅಧಿಕಾರವಿದೆ. ಅದು ಯಾರ ಹೆಸರನ್ನು ಪಟ್ಟಿಯಲ್ಲಿ ಸೇರಿಸದಿರಲು ಅಥವಾ ತೆಗೆದುಹಾಕಲು ನಿರ್ಧರಿಸಬಹುದು. ಆದರೆ ಅದರಿಂದ ಆ ವ್ಯಕ್ತಿಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಅದಕ್ಕಾಗಿಯೇ ನಾವು ಆಯೋಗಕ್ಕೆ ಸಂಬಂಧಿತ ಪ್ರಕರಣಗಳನ್ನು ಪೌರತ್ವ ಕಾಯ್ದೆಯಡಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಿಧಿಸಿದ್ದೇವೆ," ಎಂದು ಅವರು ಹೇಳಿದರು.

ಈ ಪ್ರಕರಣವನ್ನು ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಮುಂದಿನ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com