

ಮಡಿಕೇರಿ: ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪೆಲೆಟ್ ನಿಂದ ಗಾಯಗಳಾಗಿ ಚಿಕಿತ್ಸೆ ಪಡೆಯಲು ಯತ್ನಿಸಿದ ಇಬ್ಬರು ಶಂಕಿತ ಬೇಟೆಗಾರರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ. ಬೆಟ್ಟತ್ತೂರು ಬಳಿಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಭಾರತೀಯ ಗೌರ್ ಬೇಟೆಯಾಡಿದ ಆರೋಪದ ಮೇಲೆ ನಾಪೋಕ್ಲುವಿನ ಜುಬೈರ್ ಮತ್ತು ಯಾಕೂಬ್ ಎಂಬ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಬೇಟೆ ಚಟುವಟಿಕೆಯ ಬಗ್ಗೆ ಸುಳಿವು ಪಡೆದ ಅರಣ್ಯ ಅಧಿಕಾರಿಗಳು ಗುರುವಾರ ರಾತ್ರಿ ಪಟ್ಟಿಘಾಟ್ ಅರಣ್ಯ ವಲಯದಿಂದ ಹೊರಹೋಗುವ ಎಲ್ಲಾ ಪ್ರಮುಖ ಮಾರ್ಗಗಳನ್ನು ನಿರ್ಬಂಧಿಸಿ ಬಲೆ ಬೀಸಿದರು. ರಾತ್ರಿ 9:30ರ ಸುಮಾರಿಗೆ ಮಹೀಂದ್ರಾ ಜೀಪ್ ವೊಂದು ಚೆಕ್ಪೋಸ್ಟ್ ಬಳಿ ವೇಗವಾಗಿ ಬಂದಿದ್ದು ಜೀಪ್ ಅನ್ನು ನಿಲ್ಲಿಸುವಂತೆ ಸಿಬ್ಬಂದಿ ಸೂಚಿದರು. ಆದರೆ ಚಾಲಕ ಅಧಿಕಾರಿಗಳ ಮೇಲೆ ಜೀಪ್ ಹತ್ತಿಸಲು ಪ್ರಯತ್ನಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅರಣ್ಯ ಸಿಬ್ಬಂದಿ ತಪ್ಪಿಸಿಕೊಳ್ಳುವುದನ್ನು ತಡೆಯಲು ಏರ್ ಗನ್ನಿಂದ ಹಲವಾರು ಸುತ್ತು ಪೆಲೆಟ್ಗಳನ್ನು ಹಾರಿಸಿದರು.
ಇನ್ನು ಆರೋಪಿಗಳು ವಾಹನವನ್ನು ಬಿಟ್ಟು ಕತ್ತಲೆಯಲ್ಲಿ ಪರಾರಿಯಾಗಿದ್ದರು ಎಂದು ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ದೃಢಪಡಿಸಿದರು. ನಂತರದ ಜೀಪ್ ನಲ್ಲಿ ಶೋಧ ನಡೆಸಿದಾಗ 260 ಕಿಲೋಗ್ರಾಂನಷ್ಟು ಭಾರತೀಯ ಗೌರ್ ಮಾಂಸ, ಗುಂಡುಗಳು ಮತ್ತು ಚಾಕುಗಳು ಮತ್ತು ಇತರ ಆಯುಧಗಳು ಪತ್ತೆಯಾಗಿತ್ತು.
ಆರೋಪಿಗಳು ಆರಂಭದಲ್ಲಿ ಕಾಡಿನಲ್ಲಿ ಪರಾರಿಯಾಗುವ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಪೆಲೆಟ್ ಗಾಯದ ಗುರುತುಗಳೊಂದಿಗೆ ಇಬ್ಬರು ವ್ಯಕ್ತಿಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಜುಬೈರ್ ಮತ್ತು ಯಾಕೂಬ್ ಇಬ್ಬರೂ ಪ್ರಸ್ತುತ ನಮ್ಮ ಕಣ್ಗಾವಲಿನಲ್ಲಿದ್ದಾರೆ ಎಂದು ಡಿಸಿಎಫ್ ಅಭಿಷೇಕ್ ದೃಢಪಡಿಸಿದರು. ವೈದ್ಯಕೀಯ ಚಿಕಿತ್ಸೆಯ ನಂತರ ಅವರನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.