

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಖಾಸಗಿ ರೆಸಾರ್ಟ್ಯೊಂದರಲ್ಲಿ ಜಿಪ್ಲೈನ್ ರೈಡ್ ಮಾಡುವ ವೇಳೆ ಕೇಬಲ್ ತುಂಡಾದ ಪರಿಣಾಮ ವಿಜಯಪುರ ಮೂಲದ 24 ವರ್ಷದ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಪ್ಲೈನ್ ಕೇಬಲ್ ತುಂಡಾದ ಪರಿಣಾಮ ಈ ಅನಾಹುತ ನಡೆದಿದ್ದು, ಕುಬೇರ ಸುಮಾರು 40 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಇನ್ನು, ಈ ಅನಾಹುತಕ್ಕೆ ರೆಸಾರ್ಟ್ನ ನಿರ್ಲಕ್ಷ್ಯ ಮತ್ತು ಸುರಕ್ಷತಾ ಲೋಪವೇ ಪ್ರಮುಖ ಕಾರಣ ಎನ್ನಲಾಗಿದೆ ಆ ಕುರಿತ ವರದಿ ಇಲ್ಲಿದೆ.
ಏನಿದು ಘಟನೆ?
ಜುಲೈ 3 ರಂದು ವಿಜಯಪುರ ನಗರದ ನಿವಾಸಿಯಾದ ಕುಬೇರ ಸುರಪುರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ನಲ್ಲಿ ಜಿಪ್ಲೈನ್ ರೈಡ್ ಮಾಡುವ ವೇಳೆ ಅರ್ಧ ಹಾದಿಯಲ್ಲಿ ಅದರ ಸುರಕ್ಷತಾ ಲಾಕ್ ಕಟ್ ಆಗಿದೆ. ಇನ್ನು, ಈ ದುರ್ಘಟನೆಯನ್ನು ಕೆಳಗೆ ನಿಂತು ವಿಡಿಯೋ ಮಾಡುತ್ತಿದ್ದ ಕುಬೇರ ಅವರ ಸಹೋದರ ಪ್ರಶಾಂತ್ ಅವರ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಇನ್ನು, ತೀವ್ರವಾಗಿ ಕೆಳಗೆ ಬಿದ್ದ ಪರಿಣಾಮವಾಗಿ ಕುಬೇರ ಅವರ ಎರಡೂ ಕೈ ಮತ್ತು ಕಾಲುಗಳ ಮೂಳೆಗಳು ಮುರಿದಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ ಎನ್ನಲಾಗಿದೆ. ಹಾಗಾಗಿ, ಕುಬೇರ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ರೆಸಾರ್ಟ್ ನಿರ್ಲಕ್ಷ್ಯವೇ ಕಾರಣ?
ರೆಸಾರ್ಟ್ನಲ್ಲಿ ಜಿಪ್ಲೈನ್ಗೆ ಬಳಸಲಾದ ಉಪಕರಣಗಳು ತುಕ್ಕು ಹಿಡಿದಿದ್ದವು ಮತ್ತು ರೆಸಾರ್ಟ್ ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸಿರಲಿಲ್ಲ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಅಪಘಾತದ ಆರಂಭದಲ್ಲಿ ರೆಸಾರ್ಟ್ನ ಆಡಳಿತ ಮಂಡಳಿಯು ಕುಬೇರ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡಿತ್ತು. ಆದ್ರೆ, ಇದೀಗ ಮಾತು ತಪ್ಪಿ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇತ್ತೀಚೆಗೆ ಜಿಪ್ಲೈನ್ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಬ್ರೆಜಿಲ್ನಲ್ಲಿ ಜಿಪ್ಲೈನ್ ಸರಿಯಾಗಿ ಕಟ್ಟದ ಕಾರಣ ಓರ್ವ ಮಾಡಲ್ ಸಾವನ್ನಪಿದ್ದರು. ಮತ್ತೊಂದೆಡೆ ಉತ್ತರ ಪ್ರದೇಶದ ಆಗ್ರಾದದಲ್ಲಿಯೂ ಜಿಪ್ಲೈನ್ ಮಾಡುವ ವೇಳೆ ಕೇಬಲ್ ತುಂಡಾಗಿ ಸುಮಾರು 45 ಅಡಿ ಎತ್ತರದಿಂದ ಬಿದ್ದ ಕುನಾಲ್ ಅಗರ್ವಾಲ್ ಎಂಬ 16 ವರ್ಷದ ಬಾಲಕ ದುರಂತ ಸಾವನ್ನಪ್ಪಿದ್ದ. ಅದರಂತೆ , ಈ ಲಿಸ್ಟ್ಗೆ ಹೊಸ ಸೇರ್ಪಡೆ ದಾಂಡೇಲಿಯ ಈ ಘಟನೆ!