

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (Permanent Residence Certificate - PRC) ವಿತರಣಾ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಮನೆಬಾಗಿಲಿಗೆ ಪಿಆರ್ಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಆವರು, "ಇದು ಸಾಮಾನ್ಯ ಆಡಳಿತಾತ್ಮಕ ಕ್ರಮ ಅಥವಾ ಸುಧಾರಣೆಯಲ್ಲ. ಈ ನಿರ್ಧಾರವು ಸಂವಿಧಾನಾತ್ಮಕ, ಕಾನೂನುಬದ್ಧ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಪರಿಣಾಮ ಕರ್ನಾಟಕದ ಗಡಿಯನ್ನು ಮೀರಿ ದೇಶದ ಮಟ್ಟದಲ್ಲೂ ಕಾಣಿಸಿಕೊಳ್ಳಬಹುದು ಎಂದು ಹೇಳಿದರು.
"ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲು ರಾಜ್ಯ ಸರ್ಕಾರಕ್ಕೆ ಸಂವಿಧಾನದ ಯಾವ ವಿಧಿ ಅಧಿಕಾರ ನೀಡಿದೆ?ಪೌರತ್ವ, ವಿದೇಶಿಯರು ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಆದರೆ. ಕಾಂಗ್ರೆಸ್ ಸರ್ಕಾರವು ಸಂವಿಧಾನದ ಈ ಗಡಿಗಳನ್ನು ಮಸುಕುಗೊಳಿಸುವ ರೀತಿಯಲ್ಲಿ, ಕಾನೂನುಬದ್ಧ ಆಧಾರವೇ ಪ್ರಶ್ನಾರ್ಹವಾಗಿರುವ ಕಾರ್ಯವನ್ನು ಕೈಗೊಂಡಿದೆ ಎಂದು ಆರೋಪಿಸಿದರು.
ಇದೇ ವೇಳೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಪಿಆರ್ಸಿ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಮುಂದಾಗಿರುವುದನ್ನು ಅಶೋಕ್ ಪ್ರಶ್ನಿಸಿದರು.
"ಇಷ್ಟೊಂದು ಆತುರ ಏಕೆ? ಇದರಿಂದ ಲಾಭ ಪಡೆಯುತ್ತಿರುವವರು ಯಾರು? ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಈ ಯೋಜನೆ ಜಾರಿಗೊಳಿಸುವ ಅಗತ್ಯವೇನು? ದೇಶದ ಜನತೆಗೆ ಸರ್ಕಾರ ಉತ್ತರ ನೀಡಬೇಕು" ಎಂದು ಒತ್ತಾಯಿಸಿದರು.
ಸ್ಪಷ್ಟ ಸಂವಿಧಾನಾತ್ಮಕ ಅಧಿಕಾರ ಹಾಗೂ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಿಲ್ಲದೆ ಇಂತಹ ಯೋಜನೆ ಜಾರಿಯಾದರೆ ನಕಲಿ ದಾಖಲೆಗಳ ಸೃಷ್ಟಿ, ಆಡಳಿತಾತ್ಮಕ ದುರುಪಯೋಗ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿದರು.
ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ, ಬಿಜೆಪಿ ಈ ನಿರ್ಧಾರವನ್ನು ರಾಜಕೀಯವಾಗಿ, ಕಾನೂನುಬದ್ಧವಾಗಿ ಹಾಗೂ ಸಂವಿಧಾನಾತ್ಮಕವಾಗಿ ಪ್ರಶ್ನಿಸಿ ಹೋರಾಟ ನಡೆಸಲಿದೆ" ಎಂದು ಹೇಳಿದರು.