

ಬೆಂಗಳೂರು: ಮಾನದಂಡಗಳ ಪ್ರಕಾರವೇ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ನೀಡಲು ತೀರ್ಮಾನಿಸಲಾಗಿದ್ದು, ಮುಲಾಜಿಲ್ಲದೇ ಅಕ್ರಮ ನಿವಾಸಿಗಳು ಹೊರ ಹಾಕಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಪರಮೇಶ್ವರ್ (G.Parameshwar) ಅವರು ತಿಳಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ” ಹಾಗೂ “ಶಾಶ್ವತ ನಿವಾಸ ಪ್ರಮಾಣಪತ್ರ (Permanent Resident Certificate) ವಿತರಿಸುವ ಸೇವೆಯ ಆರಂಭ”ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, 'ಕೇಂದ್ರ ಸರ್ಕಾರ ಎಸ್ಐಆರ್ ಮಾಡಲು ಪ್ರಾರಂಭಿಸಿದ್ದು 11 ಮಾನದಂಡಗಳ ಪ್ರಕಾರವೇ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ನೀಡಲು ತೀರ್ಮಾನಿಸಲಾಗಿದೆ ಎಂದರು.
'ಶಾಶ್ವತ ನಿವಾಸಿಗಳ ಪ್ರಮಾಣ ಪತ್ರವನ್ನು ಮನೆಮನೆಗೆ ತಲುಪಿಸುವ ಮೂಲಕ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರವು ಜನರ ಸೇವೆ ಮಾಡಲು ಮತ್ತೊಂದು ಹೆಜ್ಜೆಯನ್ನಟ್ಟಿದೆ. ಪಿಆರ್ಸಿಯನ್ನು ಯಾವ ಆಧಾರದ ಮೇಲೆ ನೀಡಬೇಕು ಎಂಬ ಕುರಿತು ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಉದ್ಯೋಗ, ವಿವಾಹ, ರಾಜ್ಯದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ವಾಸ ಮಾಡಿರಬೇಕು.
ಕರ್ನಾಟದಲ್ಲಿ ಜನಿಸಿರುವ ಆಧಾರದ ಮೇಲೆ ಪಿಅರ್ಸಿ ನೀಡಲು ತೀರ್ಮಾನಿಸಿದ್ದೇವೆ. ಸರ್ಟಿಫಿಕೆಟ್ಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಜನರು ಹತ್ತಾರು ಬಾರಿ, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಕಾರಣದಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಮನೆ ಮನೆಗೆ ಜಾತಿ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪ್ರವರ್ಗ 2ಎ, 2ಬಿ ಹಾಗೂ 3ಎ ಮತ್ತು 3ಬಿ ಪ್ರವರ್ಗಗಳಲ್ಲಿ 1.36 ಕೋಟಿ ಜನರಿದ್ದಾರೆ. ಪ್ರವರ್ಗ 1ರಲ್ಲಿ ಜಾತಿ ಪ್ರಮಾಣ ಪತ್ರಗಳ ಸಂಖ್ಯೆ 0.86 ಕೋಟಿ ಇದೆ. ಅನುಸೂಚಿ ಜಾತಿ ಮತ್ತು ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ 2.63 ಕೋಟಿ ಇದೆ. ಒಟ್ಟಾರೆ 4.85 ಕೋಟಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಲೆಕ್ಕ ಹಾಕಲಾಗಿದ್ದು, ತಲುಪಿಸುವ ಕಾರ್ಯ ಪ್ರಾರಂಭಿಸುತ್ತಿದ್ದೇವೆ ಎಂದರು.
ಅಂತೆಯೇ ವೆಬ್ಸೈಟ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳಿಂದ ಪಡೆಯಬಹುದಾಗಿದೆ. ವಾಟ್ಸಪ್ ಮೂಲಕ ಮತ್ತು ನೇರವಾಗಿ ಪಡೆದುಕೊಳ್ಳಬಹುದು. ಈ ರೀತಿಯ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ನಾಡಕಚೇರಿ, ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದರೆ ಅಥವಾ ಬಾಪೂಜಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದವರು ವೆಬ್ಸೈಟ್ ಮೂಲಕ ಸರ್ಟಿಫಿಕೇಟ್ ಪಡೆದುಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.