No more jurisdiction delays: 112 ಗೆ ಕರೆ ಬಂದಾಕ್ಷಣ ಸ್ಥಳಕ್ಕೆ ಪೊಲೀಸರು ತೆರಳಬೇಕು- ಗೃಹ ಇಲಾಖೆ ಮಹತ್ವದ ಆದೇಶ!

ಈ ಹಿಂದೆ ಘಟನೆಯು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕರೆ ಮಾಡಿದವರನ್ನು ಬೇರೆ ಪೊಲೀಸ್ ಠಾಣೆಗೆ ಕಳುಹಿಸುವ ಮೂಲಕ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.
112 Helpline
112 ಸಹಾಯವಾಣಿ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಪೊಲೀಸರು ತುರ್ತು ಸ್ಪಂದನಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ಜಾರಿಗೆ ತಂದಿದ್ದಾರೆ. ಇನ್ಮುಂದೆ ಘಟನೆ ನಡೆದ ಸ್ಥಳ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಅಧಿಕಾರಿಗಳು ಅಲ್ಲಿಗೆ ತೆರಳಲು ನಿರಾಕರಿಸುವಂತಿಲ್ಲ . 112 ಸಹಾಯವಾಣಿಯ ಮೂಲಕ ತುರ್ತು ಕರೆ ಬಂದಾಗ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸುವಂತೆ ಪೊಲೀಸ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ.

ಈ ಹಿಂದೆ ಘಟನೆಯು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕರೆ ಮಾಡಿದವರನ್ನು ಬೇರೆ ಪೊಲೀಸ್ ಠಾಣೆಗೆ ಕಳುಹಿಸುವ ಮೂಲಕ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಈ ವಿಷಯವು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಲ್ಲದೆ, ಪೊಲೀಸ್ ಇಲಾಖೆಗೆ ಮುಜುಗರವನ್ನೂ ಉಂಟುಮಾಡಿತ್ತು.

ಈ ಸಮಸ್ಯೆಗಳನ್ನು ಪರಿಹರಿಸಲು, ವ್ಯಾಪ್ತಿಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಬಗೆಹರಿಸುವ ಮೊದಲು ಜೀವ ರಕ್ಷಣೆ ಮತ್ತು ಸಂತ್ರಸ್ತರಿಗೆ ಸಹಾಯ ಮಾಡುವುದಕ್ಕೆ ಆದ್ಯತೆ ನೀಡುವಂತೆ ಇಲಾಖೆಯು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಹೊಸ ವ್ಯವಸ್ಥೆಯಡಿ 112 ತುರ್ತು ಸಹಾಯವಾಣಿಗೆ ಕರೆ ಬಂದಾಗ, ಗಡಿ ವ್ಯಾಪ್ತಿಯನ್ನು ನೋಡದೆ ಸಮೀಪದ ಪೊಲೀಸರು ಸ್ಥಳಕ್ಕೆ ತಲುಪಬೇಕಾಗುತ್ತದೆ. ಅಗತ್ಯವಿರುವ ಜನರಿಗೆ ತಕ್ಷಣದ ನೆರವು ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಕಳೆದ ಕೇವಲ ಆರು ತಿಂಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ಸೇವೆಯ ಮೂಲಕ ನೂರಾರು ಜೀವಗಳನ್ನು ರಕ್ಷಿಸಲಾಗಿದೆ. ಮನೆ ತೊರೆದು ನಾಪತ್ತೆಯಾಗಿದ್ದ ಸುಮಾರು 700 ಜನರನ್ನು ಕ್ಷೇಮವಾಗಿ ಪತ್ತೆಹಚ್ಚಿ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಅತ್ಯಂತ ಕಷ್ಟದ ಹಂತದಲ್ಲಿದ್ದ 60 ಮಂದಿಯನ್ನು ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆಸರಿಯುವಂತೆ ಮಾಡಿ ಜೀವ ಉಳಿಸಲಾಗಿದೆ. ಮಾನವ ಕಳ್ಳಸಾಗಣೆಯಂತಹ ಭೀಕರ ಜಾಲಗಳಿಗೆ ತಡೆ ಒಡ್ಡುವ ಜೊತೆಗೆ, 181 ಹಿರಿಯರು ಹಾಗೂ 211 ಮಕ್ಕಳನ್ನು ವಿವಿಧ ಅಪಾಯಗಳಿಂದ ರಕ್ಷಿಸಲಾಗಿದೆ.

12 ಭಾಷೆಗಳಲ್ಲಿ ಸಹಾಯವಾಣಿ ಲಭ್ಯ: ಯಾವುದೇ ಮೂಲೆಯ ಜನರಿಗೂ ನೆರವು ಸಿಗಲಿ ಎಂಬ ಉದ್ದೇಶದಿಂದ 112 ಸಹಾಯವಾಣಿಯಲ್ಲಿ ಬರೋಬ್ಬರಿ 12 ಭಾಷೆಗಳಲ್ಲಿ ಸಂವಹನ ನಡೆಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕರೆ ಬಂದ ಕೇವಲ 6.5 ನಿಮಿಷಗಳ ಸರಾಸರಿ ಅವಧಿಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಗುರಿ ಹೊಂದಲಾಗಿದೆ. ಇದಕ್ಕಾಗಿ ನಗರದ ಕಿರಿದಾದ ರಸ್ತೆಗಳಲ್ಲೂ ತಕ್ಷಣ ಧಾವಿಸಲು 65 ಅತ್ಯಾಧುನಿಕ 'ಚೀತಾ' (Cheetah) ದ್ವಿಚಕ್ರ ವಾಹನಗಳನ್ನು ರಸ್ತೆಗೆ ಇಳಿಸಲಾಗಿದೆ.

112 Helpline
112 ಹೊಯ್ಸಳ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ; ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ

ತುರ್ತು ಸಂದರ್ಭದಲ್ಲಿ ಬರುವ ಕರೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಥವಾ ಠಾಣಾ ವ್ಯಾಪ್ತಿಯ ನೆಪ ಹೇಳಿ ಜಾರಿಕೊಳ್ಳಲು ಯತ್ನಿಸುವ ಸಿಬ್ಬಂದಿಯ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಹಾಗೂ ಕಾನೂನು ಪ್ರಕ್ರಿಯೆ ಜರುಗಿಸಲಾಗುವುದು ಎಂದು ಉನ್ನತಾಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ಪ್ರತಿಯೊಂದು ಕರೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಲ್ಲಾ ಠಾಣೆಗಳ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com