self-execution ಯೋಜನೆಗಳಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಬಿಲ್ಡರ್‌ಗಳಿಗೆ ಕೆ.ಜೆ. ಜಾರ್ಜ್ ಖಡಕ್ ವಾರ್ನಿಂಗ್

ದೊಡ್ಡ ಪ್ರಮಾಣದ ವಸತಿ ಹಾಗೂ ವಾಣಿಜ್ಯ ಯೋಜನೆಗಳು ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವೂ ಸಮಾನಾಂತರವಾಗಿ ನಿರ್ಮಾಣವಾಗುವಂತೆ ಮಾಡುವುದೇ ಈ ನಿಯಮದ ಉದ್ದೇಶವಾಗಿದೆ.
KJ George
ಕೆ.ಜೆ ಜಾರ್ಜ್
Updated on

ಬೆಂಗಳೂರು: ಸೆಲ್ಫ್ ಎಕ್ಸಿಕ್ಯೂಷನ್ (Self-Execution-SE) ಯೋಜನೆಗಳಡಿ ಕಡ್ಡಾಯವಾಗಿ ನಿರ್ಮಿಸಬೇಕಾದ ವಿದ್ಯುತ್ ಮೂಲಸೌಕರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಗಳನ್ನು (KPTCL) ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರ ಜನವರಿ 12ರಂದು ಜಾರಿಯಾದ ಕೆಇಆರ್‌ಸಿ ನಿಯಮಾವಳಿಯ 3.2.4ನೇ ಕಲಂ (ಉಪಕೇಂದ್ರಗಳ ಸ್ವಯಂ ನಿರ್ವಹಣೆ) ಪ್ರಕಾರ, 7.5 ಎಂವಿಎ (MVA) ಗಿಂತ ಹೆಚ್ಚಿನ ಮಂಜೂರಾದ ವಿದ್ಯುತ್ ಲೋಡ್ ಹೊಂದಿರುವ ಯೋಜನೆಗಳು ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ತಮ್ಮ ಸ್ವಂತ ವೆಚ್ಚದಲ್ಲಿ ಉಪಕೇಂದ್ರ ಸೇರಿದಂತೆ ಅಗತ್ಯ ವಿದ್ಯುತ್ ಮೂಲಸೌಕರ್ಯವನ್ನು ನಿರ್ಮಿಸುವುದು ಕಡ್ಡಾಯವಾಗಿದೆ.

ದೊಡ್ಡ ಪ್ರಮಾಣದ ವಸತಿ ಹಾಗೂ ವಾಣಿಜ್ಯ ಯೋಜನೆಗಳು ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವೂ ಸಮಾನಾಂತರವಾಗಿ ನಿರ್ಮಾಣವಾಗುವಂತೆ ಮಾಡುವುದೇ ಈ ನಿಯಮದ ಉದ್ದೇಶವಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ ನಿರಂತರ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ಹೇಳಿದರು.

KJ George
ಬರ ನಡುವಲ್ಲೂ ವಿದ್ಯುತ್ ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸುತ್ತಿದ್ದೇವೆ: ಸಚಿವ ಕೆ.ಜೆ.ಜಾರ್ಜ್

ಈವರೆಗೆ ಬೆಂಗಳೂರು ನಗರದಲ್ಲಿ ಸುಮಾರು 45 ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಇಆರ್‌ಸಿ ನಿಯಮಾವಳಿಯಂತೆ ಶೇ.10ರಷ್ಟು ದಂಡ ವಿಧಿಸಲಾಗುವುದು. ಇದಲ್ಲದೆ, ಆರಂಭದಲ್ಲಿ 7.5 ಎಂವಿಎಗಿಂತ ಕಡಿಮೆ ವಿದ್ಯುತ್ ಲೋಡ್‌ಗೆ ಅನುಮೋದನೆ ಪಡೆದು, ಬಳಿಕ ಅಗತ್ಯ ಮೂಲಸೌಕರ್ಯ ನಿರ್ಮಿಸದೆ ಮಂಜೂರಾದ ಮಿತಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿರುವ ಯೋಜನೆಗಳನ್ನೂ ಕೆಪಿಟಿಸಿಎಲ್ ಗುರುತಿಸಿದೆ ಎಂದು ತಿಳಿಸಿದರು.

ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತರಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಾದ್ಯಂತ ಮಂಜೂರಾದ ವಿದ್ಯುತ್ ಲೋಡ್ ಮೀರಿದರೂ ಕಡ್ಡಾಯ ವಿದ್ಯುತ್ ಮೂಲಸೌಕರ್ಯ ನಿರ್ಮಿಸದ ಅಪಾರ್ಟ್‌ಮೆಂಟ್‌ಗಳು, ಟೌನ್‌ಶಿಪ್‌ಗಳು, ಲೇಔಟ್‌ಗಳು ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ ಪ್ರಸಾದ್ ಮನೋಹರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com