

ಬೆಂಗಳೂರು: ನಗರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ರೋಡ್ ರೇಜ್ ಘಟನೆ ಬೆಳಕಿಗೆ ಬಂದಿದ್ದು, ಕ್ಯಾಬ್ ಚಾಲಕನೊಬ್ಬ ಮತ್ತೊಬ್ಬ ವಾಹನ ಸವಾರನನ್ನು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು ಒಂದು ಕಿಲೋಮೀಟರ್ ದೂರ ಎಳೆದೊಯ್ದು ಬಳಿಕ ಕಾರು ಬಿಟ್ಟು ಪರಾರಿಯಾಗಿರುವ ಘಟನೆ ಚೌಡೇಶ್ವರಿ ನಗರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಕ್ಯಾಬ್ ಚಾಲಕ ಅನಂತ್ ಎಂಬಾತ ಮದ್ಯದ ಅಮಲಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸುತ್ತಿದ್ದಾನೆ ಎನ್ನಲಾಗಿದೆ.
ಇದನ್ನು ಗಮನಿಸಿದ ಮಂಜುನಾಥ್ ಎಂಬ ಮತ್ತೊಬ್ಬ ವಾಹನ ಸವಾರ, ಕಾರನ್ನು ತಡೆದು ಚಾಲಕನ ವರ್ತನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಂಜುನಾಥ್ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಅನಂತ್, ಮಂಜುನಾಥ್ ಅವರತ್ತ ಕಾರು ಚಲಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಂಜುನಾಥ್ ಕಾರಿನ ಬಾನೆಟ್ ಮೇಲೆ ಸಿಲುಕಿಕೊಂಡಿದ್ದು, ಅದಾಗ್ಯೂ ಆರೋಪಿಯು ಕಾರನ್ನು ನಿಲ್ಲಿಸದೆ ಸುಮಾರು ಒಂದು ಕಿಲೋಮೀಟರ್ ದೂರ ಚಲಾಯಿಸಿದ್ದಾನೆ. ಇದರಿಂದ ಮಂಜುನಾಥ್ ಅವರ ಜೀವಕ್ಕೆ ಗಂಭೀರ ಅಪಾಯ ಎದುರಾಗಿದೆ.
ಚೌಡೇಶ್ವರಿ ನಗರದ ರಸ್ತೆಯಲ್ಲಿ ಈ ಅಪಾಯಕಾರಿ ದೃಶ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರಿನ ಹಿಂದೆ ಬೆನ್ನಟ್ಟಿ, ವಾಹನವನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಅವರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಆದರೆ ಪೊಲೀಸರು ಸ್ಥಳಕ್ಕೆ ತಲುಪುವ ಮುನ್ನವೇ ಕ್ಯಾಬ್ ಚಾಲಕ ಅನಂತ್ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.