

ಬೆಂಗಳೂರು: ರಾಜಧಾನಿಯ ಗುಂಡಿಗಳಿಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದ್ದು, ಅದರಂತೆ ಮುಂದಿನ 8 ದಿನಗಳ ಕಾಲ ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಮಾಡಿದ್ದಾರೆ. ಹಾಗಾದರೆ, ಯಾವ ದಿನಗಳು ಮೇಲ್ಸೇತುವೆ ಬಂದ್? ಯಾವ ಸಮಯದಲ್ಲಿ ಬಂದ್? ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ಯಾವ ದಿನಗಳು ಬಂದ್?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಜುಲೈ 27 ರಿಂದ ಆಗಸ್ಟ್ 5 ರವರೆಗೆ ರಾತ್ರಿ ಅವಧಿಯಲ್ಲಿ ಮಾತ್ರವೇ, ಬೆಂಗಳೂರು ನಗರಕ್ಕೆ ಬರುವ ಮಾರ್ಗದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಯಾವ ಟೈಮ್ ನಲ್ಲಿ ಬಂದ್?
ಪ್ರಕಟಣೆಯ ಪ್ರಕಾರ, ಸಾಮಾನ್ಯ ದಿನಗಳಲ್ಲಿ ಅಂದ್ರೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಹಾಗು ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದವೇಳೆ ಮಧ್ಯರಾತ್ರಿ 12:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ, ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯ ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್ನಿಂದ ಎಸ್ಆರ್ಎಸ್ ಡೌನ್ ರಾಂಪ್ವರೆಗೆ (ಗೊರಗುಂಟೆಪಾಳ್ಯ ಜಂಕ್ಷನ್ ಬಳಿ) ಬೆಂಗಳೂರು ನಗರ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಏತನ್ಮಧ್ಯೆ, ಬೆಂಗಳೂರು ನಗರದಿಂದ ಹೊರಹೋಗುವ ಅಂದ್ರೆ ತುಮಕೂರು ಕಡೆಗೆ ಸಾಗುವ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ, ಸಂಚಾರ ಎಂದಿನಂತಿರುತ್ತದೆ.
ಪರ್ಯಾಯ ಮಾರ್ಗವೇನು?
ನೆಲಮಂಗಲ/ತುಮಕೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುವ ಎಲ್ಲಾ ವಾಹನಗಳನ್ನು ಕೆನ್ನಮೆಟಲ್ ಫ್ಯಾಕ್ಟರಿ ಹತ್ತಿರ ಮೇಲ್ಸೇತುವೆ ಕೆಳಗಿನ ರಾಷ್ಟ್ರೀಯ ಹೆದ್ದಾರಿ-4 (NH-4) ರಸ್ತೆಗೆ ಇಳಿಯುವುದು. ನಂತರ ಅಲ್ಲಿಂದ ಸರ್ವೀಸ್ ರಸ್ತೆ ಮೂಲಕ 8ನೇ ಮೈಲಿ ತಲುಪುವುದು. ತದನಂತರ ದಾಸರಹಳ್ಳಿ ➔ ಜಾಲಹಳ್ಳಿ ಕ್ರಾಸ್ ➔ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ➔ ಎಸ್ಆರ್ಎಸ್ ಜಂಕ್ಷನ್ ಮಾರ್ಗವಾಗಿ ಗೊರಗುಂಟೆಪಾಳ್ಯ ತಲುಪಿ ಮುಂದೆ ಸಾಗಬೇಕು.