SUV ವಿಚಾರವಾಗಿ ವೈಷಮ್ಯ: ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ರೌಡಿಶೀಟರ್‌ನ ಬರ್ಬರ ಹತ್ಯೆ..!

ಮುಖ್ಯ ಆರೋಪಿ ಅಂಬರೀಶ್ ಅಲಿಯಾಸ್ ರೆಬೆಲ್ ಎಂಬಾತನ ಸ್ನೇಹಿತನಿಗೆ ಸೇರಿದ ಎಸ್‌ಯುವಿ ಕಾರನ್ನು ವೆಂಕಟೇಶ್ ಮೂರ್ತಿಯ ಆಪ್ತನೊಬ್ಬ ಬಲವಂತವಾಗಿ ಕಿತ್ತುಕೊಂಡಿದ್ದ ಎನ್ನಲಾಗಿದೆ.
crime, file photo
ಅಪರಾಧonline desk
Updated on

ಬೆಂಗಳೂರು: ಎಸ್‌ಯುವಿ (SUV) ಕಾರು ವಿಚಾರವಾಗಿ ಶುರುವಾದ ವೈಷಮ್ಯವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕನಕಪುರ ತಾಲೂಕಿನ ಉಯ್ಯಾಂಬಳ್ಳಿ ಬಳಿ ನಡೆದಿದೆ.

ಬೆಂಗಳೂರಿನ ರೌಡಿಶೀಟರ್ ಒಬ್ಬನನ್ನು 10 ರಿಂದ 12 ಜನರ ಸಶಸ್ತ್ರ ಗ್ಯಾಂಗ್ ಬೆನ್ನಟ್ಟಿ, ಫಾರ್ಮ್‌ಹೌಸ್‌ನಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಹುಲಿಮಾವು ಪೊಲೀಸ್ ಠಾಣೆಯ ರೌಡಿಶೀಟರ್, ಅರೆಕೆರೆ ನಿವಾಸಿ ವೆಂಕಟೇಶ್ ಮೂರ್ತಿ (47) ಕೊಲೆಯಾದ ದುರ್ದೈವಿ.

ಮುಖ್ಯ ಆರೋಪಿ ಅಂಬರೀಶ್ ಅಲಿಯಾಸ್ ರೆಬೆಲ್ ಎಂಬಾತನ ಸ್ನೇಹಿತನಿಗೆ ಸೇರಿದ ಎಸ್‌ಯುವಿ ಕಾರನ್ನು ವೆಂಕಟೇಶ್ ಮೂರ್ತಿಯ ಆಪ್ತನೊಬ್ಬ ಬಲವಂತವಾಗಿ ಕಿತ್ತುಕೊಂಡಿದ್ದ ಎನ್ನಲಾಗಿದೆ. ಈ ಕಾರಿನ ವಿಚಾರವಾಗಿ ಕಳೆದ 15-20 ದಿನಗಳಿಂದ ಇರಡೂ ಬಣಗಳ ನಡುವೆ ತೀವ್ರ ಜಗಳ ನಡೆಯುತ್ತಿತ್ತು.

crime, file photo
ನಾಮಕರಣದ ವೇಳೆ ಘೋರ ಕೃತ್ಯ: ತಡವಾಗಿ ಬಂದಿದ್ದಕ್ಕೆ ಪತ್ನಿ ಮೇಲೆ ಸಿಟ್ಟು; 11 ತಿಂಗಳ ಮಗುವನ್ನು ನೆಲಕ್ಕೆಸೆದ ಪಾಪಿ ತಂದೆ, ಗಂಭೀರ ಗಾಯ..!

ಜುಲೈ 26ರ ಭಾನುವಾರ ಮಧ್ಯಾಹ್ನ ವೆಂಕಟೇಶ್ ಮೂರ್ತಿ ಉಯ್ಯಾಂಬಳ್ಳಿಯ ಶಿವಾಲದಪ್ಪನ ಬೆಟ್ಟ ರಸ್ತೆಯಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ಸ್ನೇಹಿತರೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ 10-12 ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ.

ಪ್ರಾಣ ಉಳಿಸಿಕೊಳ್ಳಲು ವೆಂಕಟೇಶ್ ಮೂರ್ತಿ ಫಾರ್ಮ್‌ಹೌಸ್ ಬೇಲಿ ಜಿಗಿದು ಓಡಲು ಯತ್ನಿಸಿದರಾದರೂ, ಬೆನ್ನಟ್ಟಿದ ಗ್ಯಾಂಗ್ ಆತನನ್ನು ರಾಜಕಾಲುವೆ ಬಳಿ ಹಿಡಿದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿ ಅಂಬರೀಶ್ ಮತ್ತು ಆತನ ಸಹಚರ ಬಸವ ಸದ್ಯ ತಲೆಮರೆಸಿಕೊಂಡಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com