

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗ್ತಿದ್ದಂತೆ ಫುಲ್ ಅಲರ್ಟ್ ಆಗಿದ್ದಾರೆ. ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಯುಟಿ ಖಾದರ್ ಅವರು, ಆಸ್ಪತ್ರೆ ಸಿಬ್ಬಂದಿ ಬಗ್ಗೆ ಪರಿಶೀಲನೆ, ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ವಿಧಾನ, ತುರ್ತು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಪರಿಶೀಲನೆ ನೂತನ ಸಚಿವ ಖಾದರ್ ಇಳಿದಿದ್ದಾರೆ.
ಅಲ್ಲದೇ ರೋಗಿಗಳ ಬಳಿಯೂ ತೆರಳಿ ಸಚಿವ ಖಾದರ್ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಸ್ಪತ್ರೆ ಆವರಣದಲ್ಲಿದ್ದ ಪ್ರತಿಯೊಬ್ಬರಿಂದಲೂ ಖಾದರ್ ಮಾಹಿತಿ ಪಡೆದಿದ್ದಾರೆ. ಸಚಿವ ಖಾದರ್ ಭೇಟಿ ವೇಳೆ ಗರ್ಭಿಣಿ ನೆಲದ ಮೇಲೆ ಕುಳಿತಿರುವುದನ್ನ ಕಂಡು ಖಾದರ್ ಗರಂ ಆಗಿದ್ದಾರೆ.
ಮೇಲೆ ಕೂರಿಸಿ ಎಂದು ವೈದ್ಯರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆರಿಗೆ ಕೊಠಡಿ, ಸಿಸೇರಿಯನ್ ವಾರ್ಡ್ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದ ಖಾದರ್ ಅವರು ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಆಸ್ಪತ್ರೆ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಆರೋಗ್ಯ ಸಚಿವ ಯು ಟಿ ಖಾದರ್, ಆಸ್ಪತ್ರೆಯಲ್ಲಿ ನೈಜವಾದ ಪರಿಸ್ಥಿತಿ ನೋಡಲು
ಬಂದೆ. ಏನೆಲ್ಲಾ ಲೋಪದೋಷವಿದೆ ನೋಡಿದ್ದೇನೆ. ಆಸ್ಪತ್ರೆಯ ಎಲ್ಲಾ ಕಡೆ ವಿಸಿಟ್ ಮಾಡಿದ್ದು, ಇವತ್ತು ಇಬ್ಬರು ವೈದ್ಯರು ಗೈರಾಗಿದ್ರೂ
ಅವರಿಗೆ ನಾಳೆ ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸುತ್ತೇನೆ ಎಂದಿದ್ದಾರೆ.
Advertisement