

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಜೂನ್ 8 ರಂದು ಸಂಜೆ 7:00 ರಿಂದ ರಾತ್ರಿ 10:15 ರ ನಡುವೆ ನಿರ್ಮಾಣ ಹಂತದ ಕಟ್ಟದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರಿಯಕರ, ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡಲು ಮೃತದೇಹಕ್ಕೆ ಕಂಬಳಿ ಸುತ್ತಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಂಗನೇಗೌಡ ಮಾಲಿಪಾಟೀಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 91/2026, ಸೆಕ್ಷನ್ 103(1), 238 BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ವರಿಷ್ಠಾಧಿಕಾರಿಯ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯ ಮೂಲಕ, ಮೃತ ಮಹಿಳೆಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಾರಟಗಿ ನಿವಾಸಿ ದಿಮ್ಮುಲಪ್ಪ ನಾಯಕ್ ಅವರ ಪತ್ನಿ(43 ವರ್ಷ) ಎಂದು ಗುರುತಿಸಲಾಗಿದೆ.
ತನಿಖೆಯ ಪ್ರಕಾರ ಮೃತ ಮಹಿಳೆ ಕುಷ್ಟಗಿ ತಾಲೂಕಿನ 30 ವರ್ಷದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಘಟನೆ ನಡೆದ ರಾತ್ರಿ ಆ ವ್ಯಕ್ತಿ ಆಕೆಯನ್ನು ಕನಕಗಿರಿಯ ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆತಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಆಕೆಯ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿ, ಕೊಲೆ ಮಾಡಿ, ದೇಹವನ್ನು ಕಂಬಳಿಯಿಂದ ಸುತ್ತಿ ಸುಟ್ಟು ಹಾಕಿದ್ದಾನೆ.
ಅಪರಾಧಕ್ಕೆ ಬಳಸಲಾದ ಕಂಬಳಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬೇರೆ ಸಮುದಾಯಕ್ಕೆ ಸೇರಿದವನಾಗಿರುವುದರಿಂದ, ಆತನ ವಿರುದ್ಧ SC/ST(PoA) ಕಾಯ್ದೆ, 1989 ರ ಸೆಕ್ಷನ್ 3(2)(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement