

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ನಡೆದ ಕುಟುಂಬ ಹತ್ಯಾಕಾಂಡಕ್ಕೆ ಟ್ವಿಸ್ಟ್ ಪಡೆದುಕೊಂಡಿದೆ.
ಆನ್ಲೈನ್ ಗೇಮ್ ಚಟಕ್ಕೆ ಸಿಲುಕಿದ್ದ ಅಪ್ರಾಪ್ತ ಬಾಲಕ ತನ್ನ ತಂದೆ-ಅಕ್ಕನನ್ನು ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ದಾಖಲಿಸಿದ್ದರು. ಆದರೀಗ ತನನಿಖೆ ಮುಂದುವರೆಸಿದ ಪೊಲೀಸರು ಕೊಲೆ ಹಿಂದಿನ ನಿಜವಾದ ಕಾರಣ ಕಂಡು ಹಿಡಿದಿದ್ದಾರೆ.
ಎಸ್ಎಸ್ಎಲ್ಸಿಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದ ಬಾಲಕನು ಪಿಯುಸಿ ವಿಜ್ಞಾನ ವಿಷಯದಲ್ಲಿ ತನ್ನ ಆಸಕ್ತಿಗೆ ವಿರುದ್ಧವಾದ ಕೋರ್ಸ್ಗೆ ಪ್ರವೇಶ ಕೊಡಿಸಿದರು ಎಂಬ ಕಾರಣಕ್ಕೆ ಸ್ವಂತ ಅಕ್ಕ ಹಾಗೂ ಅಪ್ಪನನ್ನೇ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ಬಹಿರಂಗಗೊಳಿಸಿದ್ದಾನೆ.
ಜೂನ್ 6ರಂದು ಗಂಗಾವತಿ ತಾಲ್ಲೂಕಿನ ಹೊಸ ಆಯೋಧ್ಯ ಗ್ರಾಮದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ತನ್ನ ತಂದೆ, ಅಕ್ಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ತಾಯಿಗೂ ಚಾಕುವಿನಿಂದ ಇರಿದಿದ್ದು ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕನಿಗೆ ಪಿಯುಸಿಯಲ್ಲಿ ಜೀವ ವಿಜ್ಞಾನ (ಬಯಾಲಜಿ) ಕೋರ್ಸ್ ಓದಬೇಕೆಂಬ ಆಸಕ್ತಿಯಿತ್ತು. ಕುಟುಂಬದವರು ಬಲವಂತದಿಂದ ಕಂಪ್ಯೂಟರ್ ಸೈನ್ಸ್ ಓದುವಂತೆ ಒತ್ತಡ ಹೇರಿದ್ದರು ಎನ್ನುವುದು ಪೊಲೀಸರ ಮುಂದೆ ಬಾಲಕ ನೀಡಿದ ಹೇಳಿಕೆಯಿಂದ ಗೊತ್ತಾಗಿದೆ. ಮಗ ಚೆನ್ನಾಗಿ ಓದಲೆಂದು ಪೋಷಕರು ಹಾಸ್ಟೆಲ್ ಸೌಲಭ್ಯ ಮಾಡಿಕೊಟ್ಟಿದ್ದರು. ಇದೇ ವರ್ಷದ ಜನವರಿ ತನಕ ಮಾತ್ರ ಹಾಸ್ಟೆಲ್ನಲ್ಲಿದ್ದ ಬಾಲಕ ಬಳಿಕ ನಿತ್ಯ ಊರಿನಿಂದ ಕಾಲೇಜಿಗೆ ಬಂದು ಹೋಗುತ್ತಿದ್ದ.
ಪ್ರಥಮ ಪಿಯುಸಿಯಲ್ಲಿ ತನ್ನ ಇಚ್ಛೆಗೆ ವಿರುದ್ಧವಾದ ಕಂಪ್ಯೂಟರ್ ಸೈನ್ಸ್ನಲ್ಲಿ ಶೇ 40ರಷ್ಟು ಮಾತ್ರ ಫಲಿತಾಂಶ ಬಂದಿದ್ದರಿಂದ ಬಾಲಕ ಆಕ್ರೋಶಗೊಂಡಿದ್ದ. ಇದು ಕುಟುಂಬದವರಿಗೆ ಗೊತ್ತಾದರೆ ಮತ್ತೆ ತನಗಿಷ್ಟವಿಲ್ಲದ ಅದೇ ಕೋರ್ಸ್ ಓದುವಂತೆ ಒತ್ತಡ ಹೇರುತ್ತಾರೆ
ಎಂದುಕೊಂಡಿದ್ದ ಬಾಲಕನು, ಕೊಲೆ ಮಾಡುವ ಸಲುವಾಗಿ ಹೊಸ ಚಾಕು ಖರೀದಿಸಿದ್ದ’ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಇಷ್ಟವಿಲ್ಲದ ಕೋರ್ಸ್ ಓದಿದ್ದರಿಂದ ನನಗೆ ಕಡಿಮೆ ಅಂಕ ಬಂದಿತ್ತು. ನಾವು ಬಡವರಿದ್ದೇವೆ. ನಿನ್ನ ಓದಿಗಾಗಿ ಹಗಲಿರುಳು ದುಡಿದು ಹಣ ಖರ್ಚು ಮಾಡಿದರೂ ಕಿಮ್ಮತ್ತು ಕೊಡುತ್ತಿಲ್ಲ ಎಂದು ಪೋಷಕರು ಪದೇಪದೇ ಬೈಯ್ಯುತ್ತಿದ್ದರು ಎಂದು ಬಾಲಕನು ತನಿಖೆ ವೇಳೆ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವವಿಜ್ಞಾನ ವಿಷಯವನ್ನೂ ಓದಿ ತಿಳಿದುಕೊಂಡಿದ್ದ ಬಾಲಕ, ಕೊಲೆ ಮಾಡುವಾಗಲೂ ಸಾಕಷ್ಟು ಎಚ್ಚರಿಕೆ ವಹಿಸಿದ್ದಾನೆ. ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಕೆಲ ಹೊತ್ತಿನಲ್ಲಿ ಕರೆಂಟ್ ಸಂಪೂರ್ಣ ಬಂದ್ ಮಾಡಿ ಕತ್ತಲಲ್ಲಿ ಮೊದಲು ಅಕ್ಕನ ಕುತ್ತಿಗೆಗೆ ಚಾಕುವಿನಿಂದ ಇರಿದ್ದು, ಆಕೆ ಸ್ಥಳದಲ್ಲಿಯೇ ಚೀರಾಡಿ ಮೃತಪಟ್ಟಿದ್ದಾಳೆ. ಮಗಳು ಅರಚುವುದನ್ನು ಕೇಳಿ ಬಂದ ಪೋಷಕರು ತಲೆಬಗ್ಗಿಸಿ ನೋಡುವಾಗ ಬಾಲಕ ಹಿಂದಿನಿಂದ
ಬಂದು ಅವರಿಬ್ಬರ ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಕುತ್ತಿಗೆಯ ಭಾಗ ಸೂಕ್ಷ್ಮವಾಗಿದ್ದು ಅಲ್ಲಿ ಪೆಟ್ಟು ಬಿದ್ದರೆ ಬೇಗ ಜೀವ ಹೋಗುತ್ತದೆ ಎನ್ನುವುದನ್ನು ಓದಿ ತಿಳಿದುಕೊಂಡಿದ್ದೆ. ಅದಕ್ಕೆ ಎಲ್ಲರಿಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದೇನೆ’ ಎಂದು ಬಾಲಕ ನೀಡಿದ ಹೇಳಿಕೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಬಾಲಕ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೂರ್ಣ ಗುಣಮುಖನಾದ ನಂತರ ಅವನಿಗೆ ಮಾನಸಿಕ ತಜ್ಞರ ಮತ್ತು ಪೊಲೀಸರಿಂದ ಕೌನ್ಸಿಲಿಂಗ್ ನಡೆಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹೇಳಿದ್ದಾರೆ.
Advertisement