

ಬೆಂಗಳೂರು: ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಬಿಜೆಪಿ ನಾಯಕ ಆರ್. ಅಶೋಕ್ ನಡುವೆ 'ಬಿಡದಿ ಟೌನ್ಶಿಪ್' ಭೂಸ್ವಾಧೀನ ವಿಚಾರವಾಗಿ ತೀವ್ರ ರಾಜಕೀಯ ಜಟಾಪಟಿ ಏರ್ಪಟ್ಟಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಕಮಿಷನ್ ಮಿನಿಸ್ಟರ್’ ಎಂದಿರುವ ಅಶೋಕ ಅವರ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದಕ್ಕಾಗಿ ಹಾಗೂ ರಿಯಲ್ ಎಸ್ಟೇಟ್ ಆಪಾದನೆ ಮಾಡಿದ್ದಕ್ಕಾಗಿ ಆರ್. ಅಶೋಕ್ ವಿರುದ್ಧ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಅಶೋಕ್ ಅವರ ಆಸ್ತಿ ಗಳಿಕೆ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಶಿವಕುಮಾರ್ ಅವರಿಗೆ ಇನ್ನೂ ರಾಜಕೀಯ ಭವಿಷ್ಯವಿದೆ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಹೊರಟಿದ್ದಾರೆ. ಶಿವಕುಮಾರ್ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಅಶೋಕ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಅಶೋಕ ನಿಲ್ಲಿಸಬೇಕು’ ಎಂದರು.
ಅಶೋಕ ಅವರೇ, ನೀನೇನು ಕುಬೇರನ ಅಥವಾ ಟಾಟಾ-ಬಿರ್ಲಾ ಮಗನಾ, ನೀನು ಮಂತ್ರಿ ಆದ ಮೇಲೆಯೇ ತಾನೇ ಇಷ್ಟೊಂದು ಆಸ್ತಿ ಮಾಡಿದ್ದು. ನಾನು ಎಲ್ಲೂ ಹಣವನ್ನು ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಏಕವಚನದಲ್ಲೇ ಬಾಲಕೃಷ್ಣ ಪ್ರಶ್ನಿಸಿದರು.
‘ಅಶೋಕ ಬೆಂಗಳೂರು ಉಸ್ತುವಾರಿಯಾಗಿದ್ದಾಗ ಕಸದ ಸಮಸ್ಯೆಗೆ ಯಾವುದೇ ತೀರ್ಮಾನ ಮಾಡಲಿಲ್ಲ. ಕಸದ ವಿಲೇವಾರಿಗೆ ಸರಿಯಾದ ತೀರ್ಮಾನ ಮಾಡಿದ್ದರೆ, ಚುನಾವಣೆಯಲ್ಲಿ ಹೀಗೆ ಸೋಲುತ್ತಿರಲಿಲ್ಲ. ಬೆಂಗಳೂರಿನಿಂದ ಹೊರಗೆ ಅಭಿವೃದ್ಧಿ ಮಾಡಿ ಎಂದು ಇವರೇ ಭಾಷಣಮಾಡುತ್ತಾರೆ, ಈಗ ನಾವು ಹೊರವಲಯದಲ್ಲಿ ಟೌನ್ಶಿಪ್ ಮಾಡಲು ಹೋದರೆ ತರಲೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ಅಶೋಕ್ ತಲೆಯಲ್ಲಿ ಮೂರು ಕಾಸಿನ ಸರಕು ಇಲ್ಲ ಎಂದು ವ್ಯಂಗ್ಯವಾಡಿದರು.
Advertisement