ಗೃಹಲಕ್ಷ್ಮಿ ದುರುಪಯೋಗಕ್ಕೆ ಬ್ರೇಕ್; ಅರ್ಜಿ ನಮೂನೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ, Voter ID, Aadhaar-Link ಮಾಹಿತಿ ಕಡ್ಡಾಯ ಸಾಧ್ಯತೆ..!

2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು ರೂ.2,000 ನೆರವು ನೀಡಲಾಗುತ್ತಿದೆ. ಸುಮಾರು 1.1 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಐದು ಗ್ಯಾರಂಟಿ ಯೋಜನೆಗಳ ಪೈಕಿ ಅತಿ ಹೆಚ್ಚು ಹಣಕಾಸು ವೆಚ್ಚವಾಗುತ್ತಿರುವ ಯೋಜನೆ ಇದಾಗಿದೆ.
Operation Grihalakshmi
ಗೃಹಲಕ್ಷ್ಮಿ ಯೋಜನೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ನೆರವು ತಲುಪುವಂತೆ ಮಾಡಲು ಹೊಸ ಅರ್ಜಿ ನಮೂನೆಯಲ್ಲಿ ಹೆಚ್ಚುವರಿ ಪ್ರಶ್ನೆಗಳನ್ನು ಸೇರಿಸುವ ಪ್ರಸ್ತಾವನೆಯ ಕುರಿತು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು ರೂ.2,000 ನೆರವು ನೀಡಲಾಗುತ್ತಿದೆ. ಸುಮಾರು 1.1 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಐದು ಗ್ಯಾರಂಟಿ ಯೋಜನೆಗಳ ಪೈಕಿ ಅತಿ ಹೆಚ್ಚು ಹಣಕಾಸು ವೆಚ್ಚವಾಗುತ್ತಿರುವ ಯೋಜನೆ ಇದಾಗಿದೆ.

ಸದ್ಯ ಬಳಕೆಯಲ್ಲಿರುವ ಅರ್ಜಿ ನಮೂನೆಯಲ್ಲಿ ಮಹಿಳಾ ಮುಖ್ಯಸ್ಥೆಯ ಹೆಸರು, ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಪತಿಯ ಹೆಸರು ಮತ್ತು ಆಧಾರ್ ಸಂಖ್ಯೆ, ಜಾತಿ, ಮೊಬೈಲ್ ಸಂಖ್ಯೆ ಹಾಗೂ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರೇ ಎಂಬ ಮಾಹಿತಿ ಪಡೆಯಲಾಗುತ್ತಿದೆ.

ಆದರೆ, ಪರಿಷ್ಕೃತ ಅರ್ಜಿ ನಮೂನೆಯಲ್ಲಿ ನಾಲ್ಕರಿಂದ ಆರು ಹೆಚ್ಚುವರಿ ಪ್ರಶ್ನೆಗಳನ್ನು ಸೇರಿಸುವ ಸಾಧ್ಯತೆ ಇದೆ. ಫಲಾನುಭವಿಯ ಹೆಸರು ಮತದಾರರ ಪಟ್ಟಿಯಲ್ಲಿದೆಯೇ, ಮತದಾರರ ಗುರುತಿನ ಚೀಟಿ (Voter ID) ಸಂಖ್ಯೆ ಏನು, ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿದೆಯೇ ಎಂಬ ವಿವರಗಳನ್ನು ಕಡ್ಡಾಯವಾಗಿ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Operation Grihalakshmi
ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕು: CM ಡಿ.ಕೆ ಶಿವಕುಮಾರ್; Video

ಕೆಲ ಮೃತ ಫಲಾನುಭವಿಗಳ ಖಾತೆಗಳಿಗೂ ಕೂಡ ಹಣ ಜಮೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವರ ಮೊಬೈಲ್ ಸಂಖ್ಯೆಗಳು ಬೇರೆಯವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದರು.

ಈ ರೀತಿಯ ಅಕ್ರಮಗಳಿಂದ ಸುಮಾರು ರೂ.100 ಕೋಟಿ ಹಣ ದುರುಪಯೋಗವಾಗುತ್ತಿರುವ ಅಂದಾಜು ಇದೆ ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತಿಸಿ, ಅನರ್ಹರನ್ನು ಹೊರಗಿಡಲು ಹೊಸ ಅರ್ಜಿ ನಮೂನೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪರಿಷ್ಕೃತ ವ್ಯವಸ್ಥೆಯಡಿ ಈಗಾಗಲೇ ಯೋಜನೆ ಪಡೆಯುತ್ತಿರುವ ಫಲಾನುಭವಿಗಳು ಕೂಡ ಮರು ಅರ್ಜಿ ಸಲ್ಲಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಈ ಪ್ರಸ್ತಾವನೆ ಕುರಿತು ರಾಜ್ಯ ಸಚಿವ ಸಂಪುಟ ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಅರ್ಜಿ ನಮೂನೆಗೆ ಸಚಿವ ಸಂಪುಟದ ಅನುಮೋದನೆ ದೊರೆತರೆ, ಆನ್‌ಲೈನ್ ಜೊತೆಗೆ ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲೂ ಅರ್ಜಿಗಳನ್ನು ಸ್ವೀಕರಿಸಲಾಗುವುದು.

ಈ ಕುರಿತು ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ. ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com