ಸ್ವಂತ ಸಂಪಾದಿತ ಆಸ್ತಿಗಳು ಸ್ವತಂತ್ರ ಸ್ವತ್ತು: ತಂದೆಯ ಆಸ್ತಿಯಲ್ಲಿ ಸಹಭಾಗಿತ್ವ ಹಕ್ಕುಕೇಳಿದ ಮಗಳಿಗೆ ಹೈಕೋರ್ಟ್ ನಕಾರ

ಈ ತೀರ್ಪನ್ನು ಜೂನ್ 16ರಂದು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನಡಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠ ನೀಡಿದೆ.
High court
ಹೈಕೋರ್ಟ್
Updated on

ಬೆಂಗಳೂರು: ಮಹಿಳೆಯೊಬ್ಬರು ತಂದೆಯ ಹೆಸರಿನ ಹಲವು ಆಸ್ತಿಗಳಲ್ಲಿ ಸಮಪಾಲು ಕೇಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಆ ಆಸ್ತಿಗಳು ಪಿತ್ರಾರ್ಜಿತ ಅಥವಾ ಕುಟುಂಬದ ಜಂಟಿ ಆಸ್ತಿಗಳಲ್ಲ, ಬದಲಾಗಿ ತಂದೆಯ ವೈಯಕ್ತಿಕ (self-acquired/separate) ಆಸ್ತಿಗಳಾಗಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಪ್ರಕಾರ, ಮಗಳು ಸಹಭಾಗಿಯಾಗಿ (coparcener) ಹಕ್ಕು ಕೇಳಬಹುದಾದುದು ಕೇವಲ ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬ ಆಸ್ತಿಗಳಲ್ಲಿ ಮಾತ್ರ; ಆದರೆ ತಂದೆಯ ವೈಯಕ್ತಿಕ ಆಸ್ತಿಗಳಲ್ಲಿ ಅಂತಹ ಹಕ್ಕು ಅನ್ವಯಿಸುವುದಿಲ್ಲ.

ಈ ತೀರ್ಪನ್ನು ಜೂನ್ 16ರಂದು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನಡಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠ ನೀಡಿದೆ.

ಪ್ರಕರಣದ ಹಿನ್ನೆಲೆ

ಉಷಾ ಎನ್. ಸ್ವಾಮಿ ಅವರು ತಮ್ಮ ಪೋಷಕರು ಮತ್ತು ಸಹೋದರಿಯ ವಿರುದ್ಧ ಭಾಗಹಂಚಿಕೆ (partition) ಮೊಕದ್ದಮೆ ದಾಖಲಿಸಿದ್ದರು. ಕೃಷಿ ಭೂಮಿ, ಮನೆ ಆಸ್ತಿ, ಬ್ಯಾಂಕ್ ಠೇವಣಿಗಳು ಹಾಗೂ ಹೂಡಿಕೆಗಳು ಕುಟುಂಬದ ಜಂಟಿ ಆಸ್ತಿಗಳಾಗಿವೆ ಎಂದು ಅವರು ವಾದಿಸಿದ್ದರು.

ಕೆಲ ಕೃಷಿ ಭೂಮಿಗಳು ತಮ್ಮ ತಾತನಿಗೆ ಸೇರಿದ್ದವು, ನಂತರ ತಂದೆಗೆ ಬಂದಿದ್ದರಿಂದ ಅವು ಪಿತ್ರಾರ್ಜಿತ ಸ್ವರೂಪ ಕಳೆದುಕೊಂಡಿಲ್ಲ ಎಂದು ಅವರು ಹೇಳಿದ್ದರು. ಹೀಗಾಗಿ 2019ರಲ್ಲಿ ತಿದ್ದುಪಡಿ ಮಾಡಿದ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ತಮಗೂ ಸಮಾನ ಹಕ್ಕು ಇದೆ ಎಂದು ವಾದಿಸಿದರು.

ಕೆಳ ನ್ಯಾಯಾಲಯವು 2018ರಲ್ಲೇ ಅವರ ಮೊಕದ್ದಮೆಯನ್ನು ತಿರಸ್ಕರಿಸಿತ್ತು. ಆ ತೀರ್ಪನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ವಾದ-ಪ್ರತಿವಾದ

ಮೇಲ್ಮನವಿದಾರರ ಪರವಾಗಿ, ಸುಪ್ರೀಂ ಕೋರ್ಟ್ ತೀರ್ಪು ವಿನೀತ ಶರ್ಮ ವಿ ರಾಕೇಶ್ ಶರ್ಮ ಅವರನ್ನು ಉಲ್ಲೇಖಿಸಿ, ಮಗಳು ಜನ್ಮದಿಂದಲೇ ಸಹಭಾಗಿಯಾಗಿ ಹಕ್ಕು ಹೊಂದಿದ್ದಾಳೆ ಎಂದು ವಾದಿಸಲಾಯಿತು.

ಆದರೆ ಪ್ರತಿವಾದಿಗಳು, ತಾತ ಸ್ವಂತ ಹಣದಿಂದ ಖರೀದಿಸಿದ ಆಸ್ತಿಗಳನ್ನು ನಂತರ ಕುಟುಂಬ ವಿಭಾಗದಲ್ಲಿ ಹಂಚಿದ್ದರಿಂದ ಅವು ವೈಯಕ್ತಿಕ ಆಸ್ತಿಗಳಾಗಿವೆ ಎಂದು ವಾದಿಸಿದರು.

High court
ಅಕ್ರಮ ಸಂಬಂಧದಿಂದ ಜನಿಸಿದ ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು: ಹೈಕೋರ್ಟ್ ತೀರ್ಪು

ನ್ಯಾಯಾಲಯ ಅಭಿಪ್ರಾಯ

ಸಾಕ್ಷ್ಯ ಪರಿಶೀಲನೆಯ ಬಳಿಕ ನ್ಯಾಯಾಲಯ, ಮೇಲ್ಮನವಿದಾರರ ಸಾಕ್ಷ್ಯವೇ ಅವರ ವಾದವನ್ನು ದುರ್ಬಲಗೊಳಿಸಿದೆ ಎಂದು ಹೇಳಿದೆ. ತಾತನ ಸಹೋದರರೊಬ್ಬರು ನೀಡಿದ ಸಾಕ್ಷ್ಯದಲ್ಲಿ ಆ ಆಸ್ತಿಗಳು ತಾತನ ಸ್ವಂತ ಖರೀದಿಯವು ಎಂದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಗಮನಿಸಿದೆ.

ಮೇಲ್ಮನವಿದಾರರು ಆಸ್ತಿಗಳು ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬದವು ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೇಳಿದ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ನಿರ್ಧರಿಸಿದೆ. ಹೀಗಾಗಿ ಮೇಲ್ಮನವಿ ವಜಾಗೊಳಿಸಿ ಹಿಂದಿನ ತೀರ್ಪನ್ನು ಮಾನ್ಯಗೊಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com