

ಬೆಂಗಳೂರು: ಕಳೆದ 50 ವರ್ಷಗಳಲ್ಲಿ ಕಾವೇರಿ ನದಿ ತೀರ ಪ್ರದೇಶದಲ್ಲಿ 12,850 ಚದರ ಕಿಲೋಮೀಟರ್ ಹಸಿರು ಹೊದಿಕೆ ನಾಶವಾಗಿರುವ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ಸಲ್ಲಿಸದಿದ್ದರೆ ಸ್ವಯಂಪ್ರೇರಿತ (Suo Moto) ಆದೇಶ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
1965ರಿಂದ 2016ರ ಅವಧಿಯಲ್ಲಿ ಕಾವೇರಿ ನದಿ ತೀರ ಪ್ರದೇಶದಲ್ಲಿನ 12,850 ಚದರ ಕಿಲೋಮೀಟರ್ ಪ್ರದೇಶದ ನೈಸರ್ಗಿಕ ಸಸ್ಯವರ್ಗ ನಾಶವಾಗಿದೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಎನ್ಜಿಟಿ ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ಈ ಅವಧಿಯಲ್ಲಿ ಗಂಭೀರ ಪರಿಸರ ಬದಲಾವಣೆಗಳಿಗೆ ಒಳಗಾದ ಪ್ರದೇಶಗಳಲ್ಲಿ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಅಭಯಾರಣ್ಯ ಸೇರಿವೆ.
ಎನ್ಜಿಟಿಯ ದಕ್ಷಿಣ ವಲಯ ಪೀಠವು 2024ರ ಮಾರ್ಚ್ನಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. 2024ರ ಜುಲೈ ತಿಂಗಳಿನಿಂದ ಈವರೆಗೆ ಒಂಬತ್ತು ಬಾರಿ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡು ಮುಂದೂಡಲಾಗಿದ್ದು, ಈ ಅವಧಿಯಲ್ಲಿ ಸಂಬಂಧಿತ ಮಾಹಿತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ನಿರ್ದೇಶನ ನೀಡಲಾಗಿದೆ.
ಕಳೆದ ವಾರ ಮತ್ತೆ ವಿಚಾರಣೆಗೆ ಬಂದಾಗ, ನ್ಯಾಯಮೂರ್ತಿ ಪುಷ್ಪ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಪ್ರಶಾಂತ್ ಗರ್ಗವ ಅವರಿದ್ದ ಪೀಠವು ರಾಜ್ಯಗಳು ಹಿಂದಿನ ಆದೇಶಗಳನ್ನು ಪಾಲಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಎರಡು ವರ್ಷಗಳು ಕಳೆದರೂ ಪ್ರತಿವಾದಿಗಳಲ್ಲಿ ಯಾರೂ ತಮ್ಮ ಪ್ರತಿಕ್ರಿಯೆ ಸಲ್ಲಿಸಿಲ್ಲ. ಇದು ಕೊನೆಯ ಅವಕಾಶ. ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ತಮ್ಮ ವರದಿಗಳನ್ನು ಸಲ್ಲಿಸಬೇಕು. ವಿಫಲವಾದರೆ ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ಆದೇಶ ಹೊರಡಿಸಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಲಾಗಿದೆ.
Advertisement