

ಬೆಂಗಳೂರು: ಒಂದೇ ದಿನ, ಒಂದೇ ಮತದಾರರನ್ನು ಹೊಂದಿದ್ದ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಬೇರೆ ಬೇರೆ ಮತದಾನ ಕ್ರಮ ಅನುಸರಿಸಿದ ವಿಚಾರಕ್ಕೆ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿಯಿಂದ ಸ್ಪಷ್ಟನೆ ಕೋರಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಮತ್ತು ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಅನುಸರಿಸಲಾದ ವಿಭಿನ್ನ ಮತದಾನ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ, ಈ ಎರಡೂ ಚುನಾವಣೆಗಳಲ್ಲೂ ಮತದಾರರು ಶಾಸಕರೇ ಆಗಿದ್ದರೂ, ಮತದಾನ ಕ್ರಮದಲ್ಲಿ ವ್ಯತ್ಯಾಸ ಏಕೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಮತದಾನ ನಡೆಯಲಿಲ್ಲ. ಆದರೆ, ವಿಧಾನಪರಿಷತ್ ಚುನಾವಣೆಯಲ್ಲಿ ಲಭ್ಯವಿದ್ದ ಸ್ಥಾನಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಮತದಾನ ನಡೆಯಿತು ಎಂದು ಉಲ್ಲೇಖಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ತಮ್ಮ ಮತಪತ್ರವನ್ನು ಗುರುತಿಸಿದ ಬಳಿಕ ಅದನ್ನು ಪಕ್ಷದ ಅಧಿಕೃತ ಏಜೆಂಟ್ಗೆ ತೋರಿಸಿ ನಂತರ ಮತ ಚಲಾಯಿಸಬೇಕಾದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಅದೇ ಶಾಸಕರು ಮತದಾರರಾಗಿದ್ದರೂ, ಇದೇ ವಿಧಾನ ಅನುಸರಿಸಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.
ಒಂದೇ ದಿನ ನಡೆದ, ಒಂದೇ ಮತದಾರರನ್ನು ಹೊಂದಿದ್ದ ಈ ಎರಡು ಚುನಾವಣೆಯಲ್ಲಿ ಬೇರೆ ಬೇರೆ ಮತದಾನ ಕ್ರಮಗಳನ್ನು ಅನುಸರಿಸಿರುವುದರಿಂದ ಗೊಂದಲ ಉಂಟಾಗಿದೆ.
ಈ ವ್ಯತ್ಯಾಸದ ಹಿಂದಿನ ಕಾರಣವೇನು ಮತ್ತು ಯಾವ ನಿಯಮದ ಆಧಾರದಲ್ಲಿ ಇಂತಹ ವಿಭಿನ್ನ ವಿಧಾನ ಅನುಸರಿಸಲಾಗಿದೆ ಎಂಬುದನ್ನು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ಅತ್ಯಂತ ಮುಖ್ಯವಾಗಿದ್ದು, ಮತದಾನ ಕ್ರಮದ ಬಗ್ಗೆ ಯಾವುದೇ ಗೊಂದಲ ಉಳಿಯದಂತೆ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಬೇಕು ಎಂದು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
Advertisement