

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಹೊಸ ಬಟ್ಟೆ ಅಂಗಡಿಯೊಂದು ಉದ್ಘಾಟನೆಯ ಅಂಗವಾಗಿ ಕೇವಲ ಒಂದು ರೂಪಾಯಿಗೆ ಒಂದು ಟೀ-ಶರ್ಟ್ ನೀಡುವ ಆಫರ್ ಘೋಷಿಸಿದ್ದು, ಅಂಗಡಿಯ ಮುಂದೆ ಜನ ಸಾಗರವೇ ಹರಿದುಬಂದ ಘಟನೆ ಸೋಮವಾರ ನಡೆದಿದೆ.
ಈ ವಿಶೇಷ ಆಫರ್ಗಾಗಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಮುಗಿಬಿದ್ದ ಪರಿಣಾಮ ಕೆಲಕಾಲ ನೂಕುನುಗ್ಗಲು ಉಂಟಾಗಿ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಪರಿಸ್ಥಿತಿ ಕೈಮೀರದಂತೆ ತಡೆಯಲು ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಜನರನ್ನು ಚದುರಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಅಲ್ಲದೆ ಅಂಗಡಿ ಮಾಲೀಕರಿಗೆ ಹಾಗೂ ಗ್ರಾಹಕರಿಗೆ ಅಗತ್ಯ ಸೂಚನೆಗಳನ್ನು ನೀಡಿ, ಶಾಂತಿ ಕಾಪಾಡುವಂತೆ ಎಚ್ಚರಿಕೆ ನೀಡಿದರು.
ಚಿಂತಾಮಣಿಯ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಅಲಕ್ಸಿ ಎಂಬ ಹೆಸರಿನ ಹೊಸ ಬಟ್ಟೆ ಅಂಗಡಿ ಈ ವಿಶೇಷ ಆಫರ್ ನೀಡಿತ್ತು. ಮೊದಲ 100 ಗ್ರಾಹಕರಿಗೆ 1 ರೂ.ಗೆ ಒಂದು ಟೀ-ಶರ್ಟ್ ನೀಡುವುದಾಗಿ ಅಂಗಡಿ ಮಾಲೀಕರು ಘೋಷಿಸಿದ್ದರು.
ಆಫರ್ ವಿಚಾರ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ಅಂಗಡಿ ಮುಂದೆ ಜನರು ಜಮಾಯಿಸಿದ್ದರು. ಟೀ-ಶರ್ಟ್ ಪಡೆಯಲು ಯುವಕರು ಮುಗಿಬಿದ್ದ ಕಾರಣ ಕೆಲಕಾಲ ನೂಕುನುಗ್ಗಲು ಉಂಟಾಯಿತು
ಜನಸಂದಣಿ ಹೆಚ್ಚಾದ ಪರಿಣಾಮ ಬೆಂಗಳೂರು ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಕೆಲಕಾಲ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅಂಗಡಿ ಮಾಲೀಕರು ಹಾಗೂ ಗ್ರಾಹಕರಿಗೆ ಪೊಲೀಸರು ಸೂಚನೆ ನೀಡಿ ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement