

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮದ್ಯ ಸೇವಿಸಲು ಆಕ್ಷೇಪ ವ್ಯಕ್ತಪಡಿಸಿದ 70 ವರ್ಷದ ಹೆತ್ತ ತಾಯಿಯನ್ನು ಆಕೆಯ ಮಗಳು ಮತ್ತು ಮೊಮ್ಮಗ ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಜಯಮ್ಮ ಎಂದು ಗುರುತಿಸಲಾಗಿದೆ. ಕೆಂಗೇರಿಯ ಅಪಾರ್ಟ್ಮೆಂಟ್ನಲ್ಲಿ ಸೋಮವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯಲಕ್ಷ್ಮಿ(49) ಮತ್ತು ಕುಶಾಲ್(26) ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 22ರ ಬೆಳಗ್ಗೆ ಮದ್ಯ ಸೇವಿಸದಂತೆ ತಡೆಯುತ್ತಿದ್ದ ಮತ್ತು ಆಸ್ತಿ ಮಾರಿ ಕುಡಿಯೋದೆ ನಿಮ್ಮ ಖಯಾಲಿಯಾಗಿದೆ ಎಂದು ನಿಂದಿಸುತ್ತಿದ್ದ ವೃದ್ಧ ಮಹಿಳೆಯನ್ನು, ಆಕೆಯ ಮಗಳು ಹಾಗೂ ಮೊಮ್ಮಗ ಕ್ರಿಕೆಟ್ ಬ್ಯಾಟ್ ಮತ್ತು ಮರದ ಕೋಲಿನಿಂದ ಹೊಡೆದು ಕೊಂದಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಜಯಮ್ಮ ಹಾಲ್ನ ಸ್ನಾನಗೃಹದ ಬಳಿ ಬಿದ್ದಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ನಿವಾಸಿ ಧನಂಜಯ್ ನೀಡಿದ ದೂರಿನ ಮೇರೆಗೆ, ತಾಯಿ-ಮಗನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್103(1) (ಕೊಲೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಮದ್ಯಪಾನದ ಚಟ ಅಂಟಿಸಿಕೊಂಡಿದ್ದರು. ಜೂನ್ 21ರ ರಾತ್ರಿ ಇದೇ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಭಾಗ್ಯಲಕ್ಷ್ಮಿ ಜತೆ ಮಗ ಕುಶಾಲ್ ಸೇರಿಕೊಂಡು ಜಯಮ್ಮರ ತಲೆಗೆ ರಾಗಿ ಮುದ್ದೆ ಮಾಡುವ ಕೋಲಿನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಯಾರಿಗೂ ತಿಳಿಯದಂತೆ ಶವವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದರು. ಕೆಲ ಹೊತ್ತಿನ ಬಳಿಕ ಸ್ನೇಹಿತನಿಗೆ ಕರೆ ಮಾಡಿದ್ದ ಕುಶಾಲ್ "ನಮ್ಮ ಅಜ್ಜಿ ತೀರಿಕೊಂಡಿದ್ದಾಳೆ, ತಲೆ ಕೆಟ್ಟುಹೋಗಿದೆ. ಕುಡಿಯಲು ಮದ್ಯ ತೆಗೆದುಕೊಂಡು ಬಾ" ಎಂದು ಹೇಳಿದ್ದ. ಆತನ ಸ್ನೇಹಿತ ಬಂದ ಬಳಿಕ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
"ಭಾಗ್ಯಲಕ್ಷ್ಮಿ ಮದ್ಯಪಾನ ಮಾಡುತ್ತಿದ್ದ ಕಾರಣಕ್ಕೆ ಪತಿ ಬೇರೆ ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದೆರಡು ತಿಂಗಳ ಹಿಂದೆ ಹಾಸನದಿಂದ ಜಯಮ್ಮ ಇವರೊಂದಿಗೆ ವಾಸಿಸಲು ಬಂದಿದ್ದರು. ಜಯಮ್ಮ ಬಂದಾಗಿನಿಂದಲೂ ಇವರ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಇವರೆಲ್ಲರೂ ಮದ್ಯ ಸೇವಿಸಿ ಜೋರಾಗಿ ಕಿರುಚಾಡುತ್ತಿದ್ದರು ಎಂದು ಸುತ್ತಮುತ್ತಲಿನ ನಿವಾಸಿಗಳು ತಿಳಿಸಿದ್ದಾರೆ.
ಇದೀಗ ಆರೋಪಿಗಳಾದ ಭಾಗ್ಯಲಕ್ಷ್ಮಿ ಮತ್ತು ಕುಶಾಲ್ನನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್ ತಿಳಿಸಿದ್ದಾರೆ.
Advertisement