

ಬೆಂಗಳೂರು: ಸಚಿವ ಸತೀಶ ಜಾರಕಿಹೊಳಿ ಭಾಮೈದ, ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ್ದ ದಾಳಿ ಅಂತ್ಯವಾಗಿದ್ದು ಸುಮಾರು 13 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ದಾಳಿಯಲ್ಲಿ ಸಾಕಷ್ಟು ಮಹತ್ವದ ದಾಖಲೆ, ಚಿನ್ನಾಭರಣ ಪತ್ತೆಯಾಗಿದ್ದು, ಮಹತ್ವದ ದಾಖಲೆ, ಬೇನಾಮಿ ಬಾರ್ ಲೈಸೆನ್ಸ್, ಬೇನಾಮಿ ಆಸ್ತಿ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ದಾಳಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಮಂಜುನಾಥ್ ಗೆ ಸೇರಿದ 13.3 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ನಿನ್ನೆ ಇಡಿ ಅಧಿಕಾರಿಗಳು ಮಂಜುನಾಥ್ ಅವರಿಗೆ ಸೇರಿದ ಒಟ್ಟು 14 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ 5.5 ಕೋಟಿ ನಗದು ಸೇರಿದಂತೆ 7.8 ಕೋಟಿ ಮೌಲ್ಯದ ಚಿನ್ನಾಭರಣವನ್ನು ಇಡಿ ವಶಪಡಿಸಿಕೊಂಡಿದೆ. ಇದರ ಜೊತೆಗೆ 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, ಕ್ಯಾಶ್ ಬುಕ್, ಆಸ್ತಿ ಪತ್ರಗಳು ದಾಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.