

ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಬೆಂಗಳೂರಿನಲ್ಲಿ 50,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 15 ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಿದ್ದಾರೆ.
ನಗರದ ಹೊರವರ್ತುಲ ರಸ್ತೆಯಲ್ಲಿ ಬುಧವಾರ ರೋಡ್ ಶೋ ನಡೆಸಿದ ನಂತರ ಉತ್ತರ ಪ್ರದೇಶ ಜಾಗತಿಕ ಬೆಳವಣಿಗೆ ಕುರಿತ ಸಂವಾದದ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಂತ್ರಜ್ಞಾನ, ನವೋದ್ಯಮ ಮತ್ತು ಜಿಸಿಸಿ ಕಂಪನಿಗಳ ಹೂಡಿಕೆದಾರರೊಂದಿಗೆ ದಿನವಿಡೀ ಸಂವಾದ ನಡೆಸಿದ ಅವರು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಒಂಬತ್ತು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಇದರಲ್ಲಿ ಹೆಚ್ಚಿನ ಹೂಡಿಕೆಗಳು ರಾಜ್ಯದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಲು ಮೀಸಲಾಗಿವೆ. ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಕಳೆದ ಒಂಬತ್ತು ವರ್ಷಗಳಲ್ಲಿ ಉತ್ತರ ಪ್ರದೇಶವು ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಪ್ರಮುಖವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬರುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಹ್ವಾನ ನೀಡಿದರು.
ಒಂಬತ್ತು ವರ್ಷಗಳ ಹಿಂದೆ, ಉತ್ತರ ಪ್ರದೇಶವನ್ನು ದುರಾಡಳಿತದಿಂದ ಬಳಲುತ್ತಿರುವ ಕಾನೂನುಬಾಹಿರ ರಾಜ್ಯವೆಂದು ನೋಡಲಾಗುತ್ತಿತ್ತು. ಇದನ್ನು ‘ಬಿಮಾರು’ ರಾಜ್ಯ ಎಂದು ಕರೆಯಲಾಗುತ್ತಿತ್ತು. ಕೃಷಿ ಮತ್ತು ರಾಜ್ಯ ಆರ್ಥಿಕತೆಗೆ ಯಾವುದೇ ಭರವಸೆ ಇರಲಿಲ್ಲ. ಇಂದು, ಉತ್ತರ ಪ್ರದೇಶವು ಇನ್ನು ಮುಂದೆ ‘ಬಿಮಾರು’ ರಾಜ್ಯವಲ್ಲ” ಎಂದು ಅವರು ಹೇಳಿದರು.
ಹೂಡಿಕೆದಾರರಲ್ಲಿ ಉತ್ತರ ಪ್ರದೇಶದ ವರ್ಚಸ್ಸು ಸುಧಾರಿಸಲು ಸರ್ಕಾರ ಕಳೆದ ದಶಕದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಹೇಳಿದರು. “ನಮ್ಮಲ್ಲಿ ಕೈಗೆಟುಕುವ ಭೂಮಿ ಮತ್ತು ಕೌಶಲ್ಯಪೂರ್ಣ ಮತ್ತು ಕೌಶಲ್ಯರಹಿತ ಎರಡೂ ದೊಡ್ಡ ಕಾರ್ಯಪಡೆ ಇದೆ, ಇದು ಉದ್ಯಮಿಗಳಿಗೆ ಪ್ರಮುಖ ಪ್ರೋತ್ಸಾಹವಾಗಿದೆ” ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶದ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಸಮ್ಮುಖದಲ್ಲಿತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.