

ಬೆಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು 2ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಶ್ವೇತಾಳ ಪ್ರಿಯಕರ ಕೆನ್ನೆತ್ ನನ್ನು ಬಂಧಿಸಿದ್ದಾರೆ.
ಕೆಆರ್ ಪುರಂನಲ್ಲಿ ಸ್ವಂತ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದು ಪರಾರಿಯಾಗಿದ್ದ ಶ್ವೇತಾಳನ್ನು ಬಂಧಿಸಿದ ಮಾರನೇ ದಿನವೇ ಪೊಲೀಸರು ಆಕೆಯ ಪ್ರಿಯಕರ ಕೆನ್ನೆತ್ ನನ್ನು ಕೂಡ ಬಂಧಿಸಿದ್ದಾರೆ.
ಘಟನೆ ಬಳಿಕ ಇಬ್ಬರೂ ಪುದುಚೇರಿಗೆ ಪರಾರಿಯಾಗಿ ಅಲ್ಲಿ ಬೇರೆ ಬೇರೆಯಾಗಿ ತಲೆಮರೆಸಿಕೊಂಡಿದ್ದರು. ಇದೀಗ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಶ್ವೇತಾಳನ್ನು ಬಂಧಿಸಿದ್ದ ಪೊಲೀಸರು ಆಕೆಯನ್ನು 47ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಹಲವು ನಿಗೂಢ ಅಂಶಗಳನ್ನು ಭೇದಿಸಲು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
ತಲೆಮರಿಸಿಕೊಂಡಿದ್ದ ಕೆನೆತ್ ಬಂಧನಕ್ಕಾಗಿ 3 ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಪುದುಚೇರಿ ಹಾಗೂ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
6 ವಿಶೇಷ ತಂಡ ರಚನೆ
ಇನ್ನು ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್.ಪುರ ಪೊಲೀಸರು ಒಟ್ಟು 6 ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಕರಣದ ಪ್ರತಿಯೊಂದು ಕೊಂಡಿಯನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ.