

PWD ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆಯಲ್ಲಿ 13 ಕೋಟಿ ಮೌಲ್ಯದ ಆಸ್ತಿ ಪತ್ತೆ!ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಕೆಲವು ಅಬಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದ್ದು, ರಾಜ್ಯ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಮತ್ತು ಸಂಘಟಿತ ಭ್ರಷ್ಟಾಚಾರದ ಆರೋಪ ಹೊರಿಸಿದೆ.
ಮಾಜಿ ಸಂಸದ ವೈ ದೇವೇಂದ್ರಪ್ಪ ಅವರ ಪುತ್ರ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 13 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
"ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಗಳು, ಅವರ ಸಹಚರರು ಮತ್ತು ಖಾಸಗಿ ವ್ಯಕ್ತಿಗಳು ಲಂಚ ಸಂಗ್ರಹಕ್ಕಾಗಿ ಸಂಘಟಿತ ಸಿಂಡಿಕೇಟ್ ಜಾಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಇಡಿ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
"ಕರ್ನಾಟಕದಲ್ಲಿ ಅಬಕಾರಿ ಇಲಾಖೆಯ ಬಹುತೇಕ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು/ಕುಟುಂಬ ಸದಸ್ಯರಿಂದ ನಿಯಂತ್ರಿಸಲ್ಪಡುವ ವ್ಯಕ್ತಿಗಳ ಹೆಸರಿನಲ್ಲಿ ಮದ್ಯದ ಪರವಾನಗಿಗಳನ್ನು ಪಡೆದಿದ್ದಾರೆ ಮತ್ತು ಅಕ್ರಮವಾಗಿ ಮದ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ" ಎಂದು ಇಡಿ ಹೇಳಿದೆ.
ದಾಳಿ ವೇಳೆ ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು ಪತ್ತೆ
ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್ಗಳು ಹಾಗೂ ಅವುಗಳ ಅಗ್ರಿಮೆಂಟ್ ಬಾಂಡ್ಗಳು ಪತ್ತೆಯಾಗಿವೆ.
ಅಕ್ರಮ ನೆಟ್ವರ್ಕ್
ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ಈ ಬೇನಾಮಿ ಬಾರ್ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್
ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:
ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.
ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.