ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ! ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ- ಏನಿದು ಬಿಜೆಪಿ ಆರೋಪ?

ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು ಎಂದು ಆಶೋಕ್ ಪ್ರಶ್ನಿಸಿದ್ದಾರೆ.
KRS Dam
ಕೆಆರ್ ಎಸ್ ಅಣೆಕಟ್ಟು
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹವಾಗಿದೆ. ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೋಮವಾರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ. ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು? ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ! ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ಈ ನಾಡದ್ರೋಹಿ ಕಾಂಗ್ರೆಸ್ ಪಕ್ಷದ ಇತಿಹಾಸವೇ ಇಷ್ಟು. ಅಧಿಕಾರವಿಲ್ಲದಾಗ: "ನಮ್ಮ ನೀರು ನಮ್ಮ ಹಕ್ಕು" ಅಂತ ನಾಟಕದ ಬೊಬ್ಬೆ! ಅಧಿಕಾರ ಸಿಕ್ಕಾಗ: "ನಮ್ಮ ನೀರು ತಮಿಳುನಾಡಿನ ಹಕ್ಕು" ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು. ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು DMK, ಇಂದು TVK ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ? ಎಂದು ವಾಗ್ದಾಳಿ ನಡೆಸಿದ್ದಾರೆ.

KRS Dam
ಬತ್ತುತ್ತಿದೆ ಕಾವೇರಿ-ಕಬಿನಿ ಒಡಲು: ಮಾಲಿನ್ಯ-ನಗರೀಕರಣದಿಂದ ಜೀವನಾಡಿಗಳಿಗೆ ಮಹಾ ಕಂಟಕ, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಶೂನ್ಯ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಯಾವ ಯಾತ್ರೆ ಮಾಡುತ್ತೀರಿ? ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ? ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ? ಕನ್ನಡ ನಾಡಿನ ಜನತೆಗೆ ಕನಿಷ್ಠ ನೀರಿನ ಭದ್ರತೆ, ನೀರಿನ ಹಕ್ಕು ನೀಡಲಾಗದ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com