

ದುಬೈ: ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಧಾವಿಸಿದ್ದು, ನಿಲ್ದಾಣದಲ್ಲಿ ಅತಂತ್ರರಾಗಿರುವ ಕನ್ನಡಿಗರ ನೆರವು ನೀಡುವುದಾಗಿ ಹೇಳಿದ್ದಾರೆ.
ಇರಾನ್- ಇಸ್ರೇಲ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಅತ್ತ ದುಬೈ ಮೇಲೂ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿವೆ. ಪರಿಣಾಮ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸೇವೆಯಲ್ಲಿ ಗಂಭೀರ ವ್ಯತ್ಯಯವಾಗಿದ್ದು, ಸಂಘರ್ಷದ ಹಿನ್ನೆಲೆಯಲ್ಲಿ ದುಬೈನಿಂದ ಭಾರತಕ್ಕೆ ಬರಬೇಕಿರುವ ವಿಮಾನಗಳನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ದುಬೈ ವಿಮಾನ ನಿಲ್ದಾಣದ ಮೇಲೂ ಕ್ಷಿಪಣಿ ದಾಳಿಯಾಗಿದ್ದು, ಜಗತ್ತಿನ ಅತೀ ದೊಡ್ಡ ಕಟ್ಟಡ ಎಂಬ ಖ್ಯಾತಿಗಳಿಸಿರುವ ಬುರ್ಜ್ ಖಲೀಫಾ ಬಳಿ ಕ್ಷಿಪಣಿ ಸ್ಫೋಟಗೊಂಡಿದೆ. ಅಂತೆಯೇ ಜಗತ್ತಿನ ಅತೀದೊಡ್ಡ ಫೈವ್ ಸ್ಟಾರ್ ಹೊಟೆಲ್ ಎಂಬ ಖ್ಯಾತಿ ಗಳಿಸಿರುವ ಬುರ್ಜ್ ಅಲ್ ಅರಬ್ ಕಟ್ಟಡವೂ ಡ್ರೋನ್ ದಾಳಿಯಲ್ಲಿ ಹಾನಿಗೊಳಗಾಗಿ ತನ್ನ ಸೇವೆ ನಿಲ್ಲಿಸಿದೆ.
ಈ ನಡುವೆ ದುಬೈನಲ್ಲಿ ಭಾರಿ ಗಂಭೀರ ಸ್ಥಿತಿ ಇದೆ ಎನ್ನುವ ಸುದ್ದಿಗಳು ಬರುತ್ತಿರುವ ನಡುವೆಯೇ, ಇಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಮರೋಪಾದಿ ಕ್ರಮಗಳನ್ನು ಕೈಗೊಂಡಿರುವಂತೆಯೇ ಅತ್ತ ವಿಮಾನ ನಿಲ್ದಾಣದಲ್ಲಿರುವ ಡ್ರೋನ್ ಪ್ರತಾಪ್ ಮತ್ತು ಇತರೆ ಕನ್ನಡಿಗರು ಎಲ್ಲರೂ ಸೇಫ್ ಆಗಿರುವುದಾಗಿ ವಿಡಿಯೋ ಮಾಡಿದ್ದಾರೆ.
ಕನ್ನಡಿಗರಿಗೆ ಡ್ರೋನ್ ಪ್ರತಾಪ್ ನೆರವು
ದುಬೈನಲ್ಲಿರುವ ಕನ್ನಡಿಗರು ಇದೀಗ ಅತಂತ್ರರಾಗಿದ್ದಾರೆ. ಸ್ವತಃ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದು, ಭಾರತಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಡ್ರೋನ್ ಪ್ರತಾಪ್ ತಾವು ಮಾತ್ರವಲ್ಲದೇ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿರುವ ಇತರೆ ಕನ್ನಡಿಗರನ್ನೂ ತಾಯ್ನಾಡಿಗೆ ಕರೆತರುವುದಾಗಿ ಹೇಳಿದ್ದಾರೆ. ಈ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಸಂಬಂಧಿಕರಿಗೆ ವಿಡಿಯೋ ಕರೆ
ದುಬೈ ವಿಮಾನ ನಿಲ್ದಾಣದಲ್ಲಿ ಆತಂಕದಲ್ಲಿರುವ ಕನ್ನಡಿಗರಿಗೆ ಧೈರ್ಯ ತುಂಬಿರುವ ಡ್ರೋನ್ ಪ್ರತಾಪ್, ಇಲ್ಲಿ ನಿಮ್ಮವರು ಎಲ್ಲರೂ ಸೇಫ್ ಆಗಿದ್ದಾರೆ. ಭಯ ಪಡಬೇಡಿ. ಇಲ್ಲಿಯಾವುದೇ ಆತಂಕ ಇಲ್ಲ ಎಂದು ಸಂಬಂಧಿಕರಿಗೆ ವಿಡಿಯೋ ಮೂಲಕ ಹೇಳಿದ್ದಾರೆ. ಇದೇ ವೇಳೆ, ಆದಷ್ಟು ಬೇಗ ನಾವು ಭಾರತಕ್ಕೆ ಹೋಗುತ್ತೇವೆ. ಭಯ ಪಡಬೇಡಿ. ವಿಮಾನ ಆರಂಭವಾಗುತ್ತದೆ. ಅಲ್ಲಿಯವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಡ್ರೋನ್ ಪ್ರತಾಪ್ ಧೈರ್ಯ ತುಂಬಿದ್ದಾರೆ. ಅಲ್ಲಿಯವರೆಗೂ ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಊಟ, ವಸತಿ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳುವುದಾಗಿ ಡ್ರೋನ್ ಪ್ರತಾಪ್ ಭರವಸೆ ನೀಡಿದ್ದಾರೆ.
Advertisement