ದುಬೈ ವಿಮಾನ ನಿಲ್ದಾಣ ಬಂದ್: ಬಳ್ಳಾರಿ ಶಾಸಕ ಸೇರಿ 50ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟದಲ್ಲಿ

ನಾವು ಮುಂಚಿತವಾಗಿ ಒಳಗೆ ಪ್ರವೇಶಿಸಿದ್ದರೆ ವಸತಿ ವ್ಯವಸ್ಥೆ ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು. ಇದೀಗ ನಾವು ಹೊರಗಡೆ ನಿಂತುಕೊಂಡಿದ್ದೇವೆ. ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ.
File photo
ಸಂಗ್ರಹ ಚಿತ್ರ
Updated on

ಬಳ್ಳಾರಿ: ಇಸ್ರೇಲ್–ಇರಾನ್ ಉದ್ವಿಗ್ನತೆಯ ಹಿನ್ನೆಲೆ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಶಾಸಕ ಭರತ್ ರೆಡ್ಡಿ ಸೇರಿ ಬಳ್ಳಾರಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ತಿಳಿದುಬಂದಿದೆ.

ಶಾಸಕ ಭರತ್ ರೆಡ್ಡಿ ಕುಟುಂಬ ಸಮೇತ ಕಳೆದ ವಾರ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಶಾರ್ಜಾದಿಂದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ ಆಗಮಿಸಿ, ರಾತ್ರಿ 9 ಗಂಟೆಗೆ ಭಾರತಕ್ಕೆ ಹಿಂತಿರುಗಬೇಕಿದ್ದ ವಿಮಾನವನ್ನು ಏರಲು ಸಿದ್ಧರಾಗಿದ್ದರು. ಆದರೆ, ಭದ್ರತಾ ಕಾರಣಗಳಿಂದ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಟರ್ಮಿನಲ್ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.

ನಾವು ಮುಂಚಿತವಾಗಿ ಒಳಗೆ ಪ್ರವೇಶಿಸಿದ್ದರೆ ವಸತಿ ವ್ಯವಸ್ಥೆ ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು. ಇದೀಗ ನಾವು ಹೊರಗಡೆ ನಿಂತುಕೊಂಡಿದ್ದೇವೆ. ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪ್ರವಾಸಿಗನೋರ್ವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಂಪಿನ ಹಲವಾರು ಸದಸ್ಯರು ಹಿರಿಯ ನಾಗರಿಕರಾಗಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ, ಅವರಲ್ಲಿ ಕೆಲವರು 70 ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರು. ಪ್ರವಾಸ ಮುಗಿದ ನಂತರ ಹಣ ಖಾಲಿಯಾಗಿರುವುದರಿಂದ, ಅನೇಕರು ದುಬೈನಲ್ಲಿ ವಸತಿ ಸೌಕರ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಹೋಟೆಲ್ ದರಗಳು ರಾತ್ರಿಗೆ 15,000 ರಿಂದ 20,000 ರೂ.ಗಳವರೆಗೆ ಏರಿದೆ ಎಂದು ತಿಳಿಸಿದ್ದಾರೆ,

File photo
ನಮ್ಮ ಶಾಸಕ ಭರತ್ ರೆಡ್ಡಿ ಸೇರಿ ಹಲವರು ದುಬೈನಲ್ಲಿ ಸಿಲುಕಿದ್ದಾರೆ, ರಕ್ಷಣೆಗೆ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಡಿಕೆ.ಶಿವಕುಮಾರ್ ಆಗ್ರಹ

ನಾವು ಪಾದಚಾರಿ ಮಾರ್ಗದ ಮೇಲೆ ನಿಂತಿದ್ದೇವೆ. ಅನೇಕ ವೃದ್ಧರು ನಮ್ಮೊಂದಿಗಿದ್ದಾರೆ. ಇದು ಗಂಭೀರ ಆರೋಗ್ಯ ಅಪಾಯವಾಗಿ ಪರಿಣಮಿಸುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಕಷ್ಟದಲ್ಲಿರುವವರಿಗೆ ತಾತ್ಕಾಲಿಕ ಆಶ್ರಯ, ವೈದ್ಯಕೀಯ ನೆರವು ಹಾಗೂ ತ್ವರಿತವಾಗಿ ಭಾರತಕ್ಕೆ ಮರಳಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ನಡುವೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದಾರೆ: ಗೃಹ ಸಚಿವ

ಏತನ್ನಧ್ಯೆ ಭಾನುವಾರ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಸಂಕಷ್ಟಕ್ಕೆ ಸಿಲುಕಿರುವವರ ನಿಖರ ಸಂಖ್ಯೆಯ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇದೀಗ ನಮಗಿರುವ ಮಾಹಿತಿಗಳ ಪ್ರಕಾರ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದಾರೆಂದು ತಿಳಿದುಬಂದಿದೆ. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳೂ ಸೇರಿದ್ದಾರೆಂದು ಹೇಳಿದ್ದಾರೆ.

ಎಲ್ಲರನ್ನೂ ಸಂಪರ್ಕಿಸಿ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ತೊಂದರೆಯಿಲ್ಲದೆ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com