

ಶಿವಮೊಗ್ಗ: ಮಧ್ಯ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಸಂಪರ್ಕ ಸುಧಾರಿಸುವ ಗುರಿ ಹೊಂದಿರುವ ಎರಡು ಪ್ರಮುಖ ರೈಲು ಮಾರ್ಗ ಯೋಜನೆಗಳಾದ ಶಿವಮೊಗ್ಗ-ಹರಿಹರ ಮತ್ತು ಶಿಕಾರಿಪುರ ಮೂಲಕ ಶಿವಮೊಗ್ಗ-ರಾಣೆಬೆನ್ನೂರು ಸಂಪರ್ಕದ ಮಾರ್ಗ ಭೂಸ್ವಾಧೀನ ಮತ್ತು ವೆಚ್ಚ ಹಂಚಿಕೆ ಅಡೆತಡೆಗಳೊಂದಿಗೆ ಕಾಗದದಲ್ಲೇ ಉಳಿದಿವೆ.
ಭಾರತೀಯ ರೈಲ್ವೆ ಮತ್ತು ರಾಜ್ಯ ಸರ್ಕಾರದ ನಡುವೆ 50:50 ವೆಚ್ಚ ಹಂಚಿಕೆ ಆಧಾರದ ಮೇಲೆ 79 ಕಿಮೀ ಉದ್ದದ ಶಿವಮೊಗ್ಗ- ಹರಿಹರ ರೈಲು ಮಾರ್ಗವನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಯು ಮಲೆನಾಡು ಮತ್ತು ಮಧ್ಯ ಕರ್ನಾಟಕದ ನಡುವೆ ಪ್ರಯಾಣದ ಅವಧಿಯನ್ನು ಕಡಿತಗೊಳಿಸುವ, ಪ್ರಯಾಣಿಕರ ಸಂಪರ್ಕವನ್ನು ಬಲಪಡಿಸುವ ಮತ್ತು ಹರಿಹರದ ಸುತ್ತಮುತ್ತಲಿನ ಕೈಗಾರಿಕಾ ಕೇಂದ್ರಗಳಿಗೆ ಸರಕು ಸಾಗಣೆಯನ್ನು ಸುಲಭಗೊಳಿಸುವ ಉದ್ದೇಶ ಹೊಂದಲಾಗಿದೆ.
ಆದರೆ, ಯೋಜನೆ ಇನ್ನೂ ಅನುಷ್ಟಾನವಾಗಿಲ್ಲ. ಸುಮಾರು 488 ಹೆಕ್ಟೇರ್ ಜಮೀನು ಅಗತ್ಯವಿದ್ದು, ಈವರೆಗೆ ಭೂಮಿ ಹಸ್ತಾಂತರವಾಗಿಲ್ಲ. ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ನೀಡಲು ಮತ್ತು ತನ್ನ ಪಾಲಿನ ಹಣವನ್ನು ನೀಡಲು ಇನ್ನೂ ಮುಂದಾಗಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಇದು ಯೋಜನೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಭೂಸ್ವಾಧೀನವಾಗದೆ ಕಾಮಗಾರಿ ಕಾರ್ಯ ಆರಂಭವಾಗಿಲ್ಲ. ಹೆಚ್ಚುತ್ತಿರುವ ಭೂಮಿಯ ಬೆಲೆಗಳು ಮತ್ತು ನಿರ್ಮಾಣ ವೆಚ್ಚಗಳ ನಡುವೆ ಮುಂದುವರಿದ ವಿಳಂಬವು ಯೋಜನಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಶಿಕಾರಿಪುರ ಮಾರ್ಗವಾಗಿ ಸಾಗುವ 96 ಕಿಮೀ ಉದ್ದದ ಶಿವಮೊಗ್ಗ-ರಾಣೆಬೆನ್ನೂರು ಹೊಸ ಮಾರ್ಗವೂ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಈ ಮಾರ್ಗವು ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಮಲೆನಾಡು ಪ್ರದೇಶಗಳನ್ನು ಉತ್ತರ ಕರ್ನಾಟಕದೊಂದಿಗೆ ಸೇರಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರು ಮತ್ತು ಸರಕು ಸೇವೆಗಳಿಗೆ ಪರ್ಯಾಯ ಮಾರ್ಗವಾಗಿದ್ದು, ಇದನ್ನು ಕೂಡ 50:50 ವೆಚ್ಚ ಹಂಚಿಕೆಯ ಮಾದರಿಯಲ್ಲಿ ಅನುಷ್ಟಾನಕ್ಕೆ ನಿರ್ಧರಿಸಲಾಗಿದೆ.
ಈ ಯೋಜನೆಗೆ ಅಗತ್ಯವಿರುವ 559 ಹೆಕ್ಟೇರ್ನಲ್ಲಿ 226 ಹೆಕ್ಟೇರ್ ಸ್ವಾಧೀನಪಡಿಸಿಕೊಳ್ಳಲಾಗಿದ್ದು, 333 ಹೆಕ್ಟೇರ್ ಬಾಕಿ ಉಳಿದಿದೆ. ಉಳಿದ ಭೂಮಿಯನ್ನು ಹಸ್ತಾಂತರಿಸುವವರೆಗೆ ದೊಡ್ಡ ಪ್ರಮಾಣದ ಸಿವಿಲ್ ಕಾಮಗಾರಿಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಹರಿಹರ ಮಾರ್ಗಕ್ಕೆ ಹೋಲಿಸಿದರೆ ಯೋಜನೆಯು ಭಾಗಶಃ ಪ್ರಗತಿ ಕಂಡಿದ್ದರೂ ಪೂರ್ಣ ಪ್ರಮಾಣದ ಅನುಷ್ಟಾನ ಕಾರ್ಯ ನಡೆದಿಲ್ಲ. ವೆಚ್ಚ ಹಂಚಿಕೆಯಡಿ ರಾಜ್ಯವು ಉಚಿತವಾಗಿ ಭೂಮಿಯನ್ನು ಒದಗಿಸಬೇಕು ಮತ್ತು ಯೋಜನಾ ವೆಚ್ಚದ ಅರ್ಧದಷ್ಟು ಭರಿಸಬೇಕೆಂದು ರಾಜ್ಯದ ಸಂಸದರಿಗೆ ಪ್ರತಿಕ್ರಿಯಿಸುವಾಗ ರೈಲ್ವೆ ಪದೇ ಪದೇ ಸಂಸತ್ತಿಗೆ ಹೇಳಿದೆ.
ಈ ಯೋಜನೆಗಳು ಪ್ರಯಾಣಿಕರ ಜೊತೆಗೆ ವ್ಯಾಪಾರ ಉದ್ದೇಶಗಳಿಗಾಗಿ ಮುಂಬೈ ಮತ್ತು ಉತ್ತರ ಭಾರತದೊಂದಿಗೆ ಸ್ಥಳೀಯ ಕೈಗಾರಿಕೆಗಳನ್ನು ಸಂಪರ್ಕಿಸಲು ನೆರವಾಗುತ್ತವೆ. ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದ್ದಾರೆ.
Advertisement