

ಭಟ್ಕಳ: ಕೆಲವೊಮ್ಮೆ ದೊಡ್ಡ ಆತಂಕಕ್ಕೆ ಕಾರಣವಾದ ಘಟನೆಗಳು ಕೊನೆಗೆ ನಗು ಮೂಡಿಸುವಂತಾಗುತ್ತವೆ. ಭಟ್ಕಳದಲ್ಲಿ ನಾಲ್ಕು ವರ್ಷದ ಬಾಲಕ ಕಾಣೆಯಾಗಿದ್ದ ಘಟನೆ ಕೂಡ ಅಂತಹದ್ದೇ ಒಂದು ಪ್ರಸಂಗವಾಗಿದೆ.
ಮೂಲತಃ ದಾಂಡೇಲಿಯ ಲಮಾಣಿ ಚಾಲ್ ಪ್ರದೇಶದ ನಿವಾಸಿ ಮೊಹಮ್ಮದ್ ಯಾಸಿನ್ ಅವರ ನಾಲ್ಕು ವರ್ಷದ ಪುತ್ರ ಅಝಾನ್ ಮೊಹಮ್ಮದ್ ಯಾಸಿನ್ ಶನಿವಾರ ಮನೆಯವರಲ್ಲಿ ಆತಂಕ ಮೂಡಿಸಿದ್ದ.
ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದ ಬಾಲಕ, ಬಹಳ ಹೊತ್ತಾದರೂ ಮನೆಗೆ ವಾಪಸ್ಸಾಗಿರಲಿಲ್ಲ.
ಮೊದಲು ಕುಟುಂಬದವರು ಸಂಬಂಧಿಕರ ಮನೆಗೆ ಹೋಗಿ ವಿಚಾರಿಸಿದ್ದಾರೆ, “ಇಲ್ಲಿಗೆ ಬಂದೇ ಇಲ್ಲ” ಎಂಬ ಉತ್ತರ ಬಂದಾಗ ಗಾಬರಿಗೊಂಡಿದ್ದಾರೆ. ತಕ್ಷಣ ಸುತ್ತಮುತ್ತಲಿನ ಮನೆಗಳು, ಬೀದಿಗಳು, ಬಾಲಕ ಸಾಮಾನ್ಯವಾಗಿ ಹೋಗುವ ಸ್ಥಳಗಳು ಎಲ್ಲೆಡೆ ಹುಡುಕಾಟ ಆರಂಭಿಸಿದ್ದಾರೆ.
ಸುದ್ದಿ ಕ್ಷಣಾರ್ಧದಲ್ಲೇ ಇಡೀ ಊರಿಗೆ ಹರಡಿದೆ. ನೆರೆಹೊರೆಯವರು, ಸ್ಥಳೀಯರು ಎಲ್ಲರೂ ಸೇರಿ ಬಾಲಕನಿಗಾಗಿ ಹುಡುಕಾಟಕ್ಕೆ ಮುಂದಾಗಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡ ತಕ್ಷಣ ಕಾರ್ಯಪ್ರವೃತ್ತರಾಗಿ ಪಟ್ಟಣದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪಟ್ಟಣದಿಂದ ಹೊರಡುವ ವಾಹನಗಳನ್ನೂ ತಪಾಸಣೆ ನಡೆಸಿದ್ದಾರೆ. ಸ್ಥಳೀಯ ಮಸೀದಿಗಳಲ್ಲಿ ಘೋಷಣೆ ಮಾಡಿ, ಬಾಲಕನ ಬಗ್ಗೆ ಮಾಹಿತಿ ದೊರೆತರೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಹಳಿಯಾಳ ಮತ್ತು ಜೋಯಿಡಾ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ.
ಹೀಗೆ ಸುಮಾರು ಅರ್ಧ ದಿನ ಹುಡುಕಾಟ ನಡೆದ ನಂತರ, ಒಂದು ಅಚ್ಚರಿ ಎದುರಾಗಿದೆ. ಮನೆಯವರಲ್ಲಿ ಒಬ್ಬರು ಮನೆಯ ಮೇಲ್ಛಾವಣಿಗೆ ಹೋದಾಗ ಬಾಲಕ ಮೆಟ್ಟಿಲಿನ ಕೆಳಗೆ ಮಲಗಿರುವುದು ಕಂಡು ಬಂದಿದೆ. ಆಟವಾಡುತ್ತಾ ಅಲ್ಲಿ ಹೋಗಿ ಮಲಗಿದ್ದ ಬಾಲಕ ಗಾಢ ನಿದ್ರೆಗೆ ಜಾರಿದ್ದಾನೆ. ಅರ್ಧ ದಿನ ಆತಂಕಕ್ಕೆ ಕಾರಣವಾದ ಈ ಘಟನೆ ಕೊನೆಗೆ ಎಲ್ಲರಿಗೂ ನಿಟ್ಟುಸಿರು ಮತ್ತು ನಗು ಎರಡನ್ನೂ ತರಿಸಿದೆ.
Advertisement