

ಕಾರವಾರ: ಗುಡ್ಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ದೀರ್ಘ ಪ್ರಯತ್ನದ ಬಳಿಕ ಹಾವನ್ನು ಸುರಕ್ಷಿತವಾಗಿ ಹಿಡಿದು ದೂರದ ಕಾಡಿಗೆ ಬಿಟ್ಟರು.
ತರಗತಿಯಲ್ಲಿ ಹಾವು ಬುಸುಗುಟ್ಟುತ್ತಿರುವುದು ಕಂಡು ಬಂದಿತ್ತು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ತರಗತಿಯ ಮೇಜಿನ ಕೆಳಗೆ ಸುತ್ತಿಕೊಂಡು ಕುಳಿತಿರುವುದು ಕಂಡು ಬಂದಿದೆ.
ಹಾವನ್ನು ಹೊರತೆಗೆದಲು ಪ್ರಯತ್ನಿಸಿದಾಗ ಅದು ಮೇಜಿನ ಮೇಲಿದ್ದ ಪುಸ್ತಕಗಳ ರಾಶಿಯ ನಡುವೆ ನುಗ್ಗಿ ಅಡಗಿಕೊಂಡಿತು. ಕೆಲವು ಗಂಟೆಗಳ ಪ್ರಯತ್ನದ ಬಳಿಕ ಅರಣ್ಯ ಸಿಬ್ಬಂದಿ ಹಾವನ್ನು ಯಶಸ್ವಿಯಾಗಿ ಹಿಡಿದು ದೂರದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದರು.
ಸ್ಥಳೀಯರ ಪ್ರಕಾರ, ಗುಡ್ಡಹಳ್ಳಿ ಪ್ರದೇಶದಲ್ಲಿ ದಟ್ಟವಾದ ಮರಗಳು ಮತ್ತು ತಂಪಾದ ಹವಾಮಾನ ಇರುವುದರಿಂದ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಗ್ರಾಮಸ್ಥರು ಅವುಗಳನ್ನು ಕಂಡಾಗ ಆತಂಕಪಡದೆ ಕೊಲ್ಲದೇ ದೂರ ಓಡಿಸುತ್ತಾರೆ ಎಂದು ತಿಳಿಸಿದ್ದಾರೆ.
ಘಟನೆ ವೇಳೆ ಶಿಕ್ಷಕರು ವಿದ್ಯಾರ್ಥಿಗಳನ್ನು ತಕ್ಷಣ ತರಗತಿಯಿಂದ ಹೊರಗೆ ಕಳುಹಿಸಿ ಸುರಕ್ಷತೆ ಕ್ರಮಗಳನ್ನು ಕೈಗೊಂಡಿದ್ದರು. ಹಾವು ಸ್ವತಃ ಹೊರಗೆ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ತರಗತಿ ಕೊಠಡಿಗಳ ಬಾಗಿಲು ತೆಗೆದಿದ್ದರು. ಆದರೆ ಅದು ಅಲ್ಲಿಯೇ ಉಳಿದಿದ್ದರಿಂದ ಅರಣ್ಯ ಸಿಬ್ಬಂದಿ ಬಂದು ಅದನ್ನು ಹಿಡಿದು ಕಾಡಿಗೆ ಬಿಟ್ಟರು.
ಇಲಿ-ಹೆಗ್ಗಣಗಳ ಬೇಟೆಯಾಡಲು ಹಾವು ತರಗತಿಗೆ ಬಂದಿರಬಹುದು. ಇತರ ಹಾವುಗಳ ವಾಸನೆಗಳನ್ನು ಕಾಳಿಂಗ ಸರ್ಪ ಸುಲಭವಾಗಿ ಗುರುತಿಸಬಲ್ಲದು. ಈ ವಾಸನೆ ಹಿಡಿದು ಸರ್ಪ ತರಗತಿಯೊಳಗೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹೇಳಿದ್ದಾರೆ.
Advertisement