

ಚಿತ್ರದುರ್ಗ: ಶಾಲಾ ಆವರಣದಲ್ಲಿ ಕುಳಿತು ಊಟ ಮಾಡುತ್ತಿದ್ದ ವಿದ್ಯಾರ್ಥಿನಿಗೆ ನಾಗರಹಾವು ಕಚ್ಚಿರುವ ಘಟನೆಯೊಂದು ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ತರಗತಿ ಮುಗಿಸಿ ಶಾಲಾ ಆವರಣದಲ್ಲಿ ಊಟ ಮಾಡುತ್ತಿದ್ದಾಗ ವಿದ್ಯಾರ್ಥಿನಿ ಸೃಷ್ಟಿಗೆ ನಾಗರಹಾವು ಕಚ್ಚಿದೆ. ಬಾಲಕಿ ಕಾಲಿನಿಂದ ರಕ್ತ ಬರುತ್ತಿದ್ದು, ಉರಿ ತಾಳಲಾರದೆ ಜೋರಾಗಿ ಅಳತೊಡಗಿದ್ದಳು.
ಈ ವೇಳೆ ವಿದ್ಯಾರ್ಥಿನಿಯನ್ನು ಕಂಡ ಶಿಕ್ಷಕ ರವಿ ಶಂಕರ್ ಕೂಡಲೇ ಓಡಿ ಬಂದು, ಹಾವು ಕಚ್ಚಿದ ಜಾಗಕ್ಕೆ ಬಾಯಿ ಹಾಕಿ ವಿಷ ಹೀರಿ ಹೊರಗೆ ಹಾಕಿದ್ದಾರೆ. ಬಳಿಕ ಬಾಲಕಿಯ ಕಾಲಿಗೆ ಬಟ್ಟೆಯನ್ನು ಗಟ್ಟಿಯಾಗಿ ಬಿಗಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಣಾಮ ಬಾಲಕಿ ಅಪಾಯದಿಂದ ಪಾರಾಗಿದ್ದು ವೈದ್ಯರು ಆಕೆಯನ್ನು ನಿಗಾದಲ್ಲಿರಿಸಿದ್ದಾರೆ.
ಇತ್ತ ಹಾವಿನ ವಿಷ ಹೀರಿ ಹೊರಗೆ ಹಾಕಿದ್ದ ಶಿಕ್ಷಕ ರವಿಶಂಕರ್ ಕೂಡ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಬಾಲಕಿ ಹಾಗೂ ಶಿಕ್ಷಕ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಬೃಹತ್ ಗಾತ್ರದ ನಾಗರಹಾವನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಹಿಡಿದು ಹೊಡೆದು ಹಾಕಿದ್ದು, ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement