

ನಕಲಿ ವಿದ್ಯಾರ್ಥಿವೇತನಗಳ ಮೂಲಕ ವಿದ್ಯಾರ್ಥಿಗಳನ್ನು ಮೋಸಗೊಳಿಸಿ, ಸೈಬರ್ ಅಪರಾಧದ ಹಣ ವರ್ಗಾವಣೆಗಾಗಿ ಮ್ಯೂಲ್ ಬ್ಯಾಂಕ್ ಖಾತೆಗಳನ್ನು ತೆರೆಯುವಂತೆ ಮಾಡುತ್ತಿದ್ದ ಪ್ರಕರಣದಲ್ಲಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೋಸದ ಜಾಲ ಗದಗ ನಗರದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.
ಬಂಧಿತರನ್ನು ವಕ್ಡೋತ್ ವಕೀಲ (24ವ) ಮತ್ತು ರಾಜಾ (23ವ) — ಇಬ್ಬರೂ ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನವರು, ಜೀಶಾನ್ ಅಂಸಾರಿ ಅಲಿಯಾಸ್ ಜೀಸು (22ವ) — ಜಾರ್ಖಂಡ್ ಮೂಲದವರಾಗಿ ಗೋವಾದಲ್ಲಿ ವಾಸಿಸುತ್ತಿದ್ದ ಹೋಟೆಲ್ ಕಾರ್ಮಿಕ, ಆಕಾಶ್ (32ವ) — ಛತ್ತೀಸ್ಗಢದ ಬಿಲಾಸ್ಪುರದ ಡಿಜೆ, ಮತ್ತು ಸಾಹಿಲ್ ಟೆಕ್ಚಂದಾನಿ (22ವ) — ಬಿಲಾಸ್ಪುರದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಈ ಗುಂಪು ಗದಗದ ಬಾಲಕರ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿತ್ತು. ದಾನಿಗಳಂತೆ ನಟಿಸಿ, ವಿದ್ಯಾರ್ಥಿವೇತನ ಹಣ ನೀಡುವ ಸುಳ್ಳು ಭರವಸೆ ನೀಡಿ, ಗದಗ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಖಾತೆ ತೆರೆಯುವಂತೆ ಮಾಡುತ್ತಿದ್ದರು.
ತಮ್ಮ ಯೋಜನೆ ನಿಜವೆಂದು ತೋರಿಸಲು, ಪ್ರತಿ ಹೊಸ ಖಾತೆಗೆ 2 ಸಾವಿರ ರೂಪಾಯಿ ಠೇವಣಿ ಇಡಲಾಗುತ್ತಿತ್ತು. ಖಾತೆಗಳು ಸಕ್ರಿಯವಾದ ನಂತರ, ವಿದ್ಯಾರ್ಥಿಗಳಿಂದ ಪಾಸ್ಬುಕ್, ATM ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ಪಡೆದು, ಖಾತೆಗಳ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಳ್ಳುತ್ತಿದ್ದರು.
ಗದಗ ಪೊಲೀಸರು ಮಾರ್ಚ್ 11ರಂದು ಎಫ್ ಐಆರ್ ದಾಖಲಿಸಿ, ಮೊದಲಿಗೆ ವಕ್ಡೋತ್ ವಕೀಲ ಮತ್ತು ರಾಜಾರನ್ನು ಬಂಧಿಸಿದರು. ಗದಗ ಸೆನ್ ಪೊಲೀಸ್ ಉಪಅಧೀಕ್ಷಕ ಮಹಾಂತೇಶ್ ಸಜ್ಜನ್, ಈ ಇಬ್ಬರ ಮೇಲೆ ನಿಗಾ ಇಟ್ಟು, ಎಂಟು ಮ್ಯೂಲ್ ಖಾತೆಗಳ ಕಿಟ್ಗಳನ್ನು ತಮ್ಮ ಹ್ಯಾಂಡ್ಲರ್ಗೆ ಹಸ್ತಾಂತರಿಸಲು ಗೋವಾಕ್ಕೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದ ಹ್ಯಾಂಡ್ಲರ್ನ್ನು ಕುಮಾರ್ ಎಂದು ಗುರುತಿಸಲಾಗಿದ್ದು, ಗದಗ ಜಿಲ್ಲೆಯ ಅಟ್ಟಿಕಟ್ಟಿ ತಾಂಡದ ನಿವಾಸಿ ಎಂದು ತಿಳಿದುಬಂದಿದ್ದು, ಪರಾರಿಯಾಗಿದ್ದಾನೆ.
ತನಿಖೆ ವೇಳೆ, ವಕೀಲ ಮತ್ತು ರಾಜಾ ಇತರ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿದರು. ನಂತರ ಪೊಲೀಸರು ಉಳಿದ ಮೂವರು ಆರೋಪಿಗಳನ್ನು ಬಂಧಿಸಿ, 11 ಮೊಬೈಲ್ ಫೋನ್ಗಳು ಮತ್ತು 18 ಬ್ಯಾಂಕ್ ಕಿಟ್ಗಳನ್ನು ವಶಪಡಿಸಿಕೊಂಡರು.
ಈ ಮ್ಯೂಲ್ ಖಾತೆಗಳು ಅಕ್ರಮ ಗೇಮಿಂಗ್ ಹಣ ವರ್ಗಾವಣೆ ಮತ್ತು ಸೈಬರ್ ಅಪರಾಧಗಳಿಗೆ ಬಳಸಲ್ಪಟ್ಟಿವೆ ಎಂಬ ಅನುಮಾನ ಇದೆ. ಈ ಅಪರಾಧದ ಮುಖ್ಯ ಸೂತ್ರಧಾರ ಇನ್ನೊಬ್ಬನಾಗಿದ್ದು, ಇವರು ಕೇವಲ ಕಮಿಷನ್ ಪಡೆದು ಮ್ಯೂಲ್ ಖಾತೆಗಳನ್ನು ಒದಗಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2008ರ ಸೆಕ್ಷನ್ 66(D) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳು 318, 319(2), 61(2) ಮತ್ತು 112 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement