

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿನಲ್ಲಿ ಉಂಟಾದ ಜಾತಿ ಸಂಘರ್ಷವು ಇಡೀ ಗ್ರಾಮವನ್ನೇ ಇಬ್ಭಾಗ ಮಾಡಿದ್ದು, ಇದು ಸಾಮಾನ್ಯ ಜನರ ದಿನನಿತ್ಯದ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.
ಕುರುಬ, ವಾಲ್ಮೀಕಿ ಹಾಗೂ ಮಾದಿಗ ಸಮುದಾಯಗಳ ನಡುವೆ ಉಂಟಾದ ವೈಮನಸ್ಸು ಇದೀಗ ಗ್ರಾಮದಲ್ಲಿ ಸಾಮಾಜಿಕ ಏಕತೆಯನ್ನು ನಾಶಪಡಿಸಿದೆ.
ಕಳೆದ ಕೆಲವು ವಾರಗಳಿಂದ ಗ್ರಾಮದಲ್ಲಿರುವ ಎಲ್ಲಾ ಎಂಟು ಕ್ಷೌರಿಕ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಎಲ್ಲಾ ಸಮುದಾಯಗಳಿಗೂ ಸೇವೆ ನೀಡುವ ಕ್ಷೌರಿಕರು, ಈಗ ಈ ಸಂಘರ್ಷದ ಮಧ್ಯೆ ಸಿಲುಕಿಕೊಂಡು, ಸಂಕಷ್ಟ ಅನುಭವಿಸುತ್ತಿದ್ದಾರೆ.
ಒಂದು ಸಮುದಾಯದವರಿಗೆ ಸೇವೆ ನೀಡಿದರೆ ಮತ್ತೊಂದು ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತಿರುವ ಕಾರಣ, ಕ್ಷೌರಿಕರು ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
ನಾವು ಎಂದಿಗೂ ಜಾತಿಯ ಆಧಾರದ ಮೇಲೆ ಯಾರನ್ನೂ ನೋಡಿಲ್ಲ. ಆದರೆ, ಈಗ ನಾವು ಮಾಡದ ತಪ್ಪಿನ ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ಕ್ಷೌರಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ತಮ್ಮ ಜೀವನೋಪಾಯ ಕಳೆದುಕೊಂಡಿರುವ ಅನೇಕ ಕ್ಷೌರಿಕರು ತಾತ್ಕಾಲಿಕವಾಗಿ ಕೃಷಿ ಕೂಲಿಗೆ ತೆರಳಿ ಕುಟುಂಬವನ್ನು ಸಾಗಿಸುತ್ತಿದ್ದಾರೆ.
ಈ ಪರಿಸ್ಥಿತಿಯಿಂದ ಗ್ರಾಮಸ್ಥರಿಗೂ ಸಂಕಷ್ಟ ಉಂಟಾಗಿದೆ. ಸಣ್ಣಪುಟ್ಟ ಸೇವೆಗಳಿಗೂ ಜನರು ಬಳ್ಳಾರಿ ನಗರಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಇಷ್ಟರಲ್ಲೇ ಎರ್ರಿತಾತನ ವಾರ್ಷಿಕ ಜಾತ್ರೆ, ರಥೋತ್ಸವ ನಡೆಯಬೇಕಿದ್ದು, ಒಂದು ಸಮುದಾಯ ಜಾತ್ರೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಸಮುದಾಯ ಸಂಪ್ರದಾಯ ಮುಂದುವರೆಸುವಂತೆ ಒತ್ತಾಯಿಸುತ್ತಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಆತಂಕ ಹೆಚ್ಚಾಗಿದೆ.
ಕೊಳಗಲ್ಲು ಗ್ರಾಮವು ಹಿಂದಿನಿಂದಲೂ ಜಾತಿ ಆಧಾರಿತ ಪ್ರದೇಶವಾಗಿದ್ದು, ಕುರುಬ ಮತ್ತು ಮಾದಿಗ ಸಮುದಾಯಗಳ ನಡುವೆ ಈ ಹಿಂದೆ ಕೂಡ ಸಂಘರ್ಷಗಳು ನಡೆದಿರುವ ಉದಾಹರಣೆಗಳಿವೆ.
ಪೊಲೀಸ್ ಮಾಹಿತಿಯ ಪ್ರಕಾರ, ಈ ಬಾರಿ ಉಂಟಾಗಿರುವ ವೈಮನಸ್ಸು ಮಾರ್ಚ್ ಮೊದಲ ವಾರದಲ್ಲಿ ಬಾರ್ನಲ್ಲಿ ನಡೆದ ಜಗಳದಿಂದ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. ಜಗಳದಲ್ಲಿ ಜಾತಿ ನಿಂದನೆ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement