

ಬೆಂಗಳೂರು: ಹಳೆಯ ಬೃಹತ್ ಬೆಂಗಳೂರು ಪಾಲಿಕೆಯಿಂದ ವಿಭಜನೆಯಾದ ಬಳಿಕ ರೂಪುಗೊಂಡಿರುವ ಬೆಂಗಳೂರು ಪೂರ್ವ ನಗರ ಪಾಲಿಕೆ ತನ್ನ ಮೊದಲ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಭರ್ಜರಿ ಅನುದಾನ ಘೋಷಿಸಿದೆ.
2026-27ನೇ ಸಾಲಿಗೆ ಒಟ್ಟು ರೂ.3,889.98 ಕೋಟಿ ವೆಚ್ಚದ ಬಜೆಟ್ ರೂಪಿಸಲಾಗಿದ್ದು, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳಿಗೆ ಆದ್ಯತೆ ನೀಡಲಾಗಿದೆ.
ಬಜೆಟ್ ಭಾಷಣ ಮಾಡಿದ ಪೂರ್ವ ನಗರ ಆಯುಕ್ತ ಡಿ.ಎಸ್. ರಮೇಶ್ ಅವರು, ಪೂರ್ವ ಪಾಲಿಕೆಯ ವ್ಯಾಪ್ತಿಯಲ್ಲಿ ಈಗಾಗಲೇ 4.5 ಲಕ್ಷ ಆಸ್ತಿ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆಸ್ತಿ ತೆರಿಗೆಯಿಂದ ರೂ.1,500 ಕೋಟಿ ಹಾಗೂ ಕಟ್ಟಡ ನಕ್ಷೆ ಅನುಮೋದನೆ, ಒಸಿ (Occupancy Certificate) ಮತ್ತು ಇತರೆ ಶುಲ್ಕಗಳಿಂದ ರೂ.982 ಕೋಟಿ ಸೇರಿ ಒಟ್ಟು ರೂ.2,482 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಬಜೆಟ್ ನಲ್ಲಿ ಮೂಲಸೌಕರ್ಯ ಮತ್ತು ಕಲ್ಯಾಣ ಕ್ರಮಗಳ ಮೇಲೆ ಒತ್ತು ನೀಡಲಾಗಿದ್ದು, ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ, 298.10 ಕೋಟಿ ರೂ. ವೆಚ್ಚದಲ್ಲಿ ಅಪಧಮನಿ ಮತ್ತು ಉಪ ಅಪಧಮನಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಘನತ್ಯಾಜ್ಯ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರತಿ ವಾರ್ಡ್ಗೆ ರೂ.2.25 ಕೋಟಿ ಅನುದಾನ ನೀಡಲಾಗಿದ್ದು, ಒಟ್ಟು ರೂ.112.50 ಕೋಟಿ ವಾರ್ಡ್ ಅಭಿವೃದ್ಧಿಗೆ ಮೀಸಲಾಗಿದೆ. ಔಟರ್ ರಿಂಗ್ ರೋಡ್ನ ಅಲ್ಪೈನ್ ಇಕೋ ರಸ್ತೆ ಅಭಿವೃದ್ಧಿಗೆ ರೂ.50 ಕೋಟಿ, ಸಾರ್ವಜನಿಕ ಸ್ಥಳಗಳ ಸಮಗ್ರ ಅಭಿವೃದ್ಧಿಗೆ ರೂ.20 ಕೋಟಿ, ರೈಲ್ವೆ ಓವರ್ ಬ್ರಿಡ್ಜ್ ಹಾಗೂ ಅಂಡರ್ ಪಾಸ್ ನಿರ್ಮಾಣಕ್ಕೆ ರೂ.25 ಕೋಟಿ ಹಾಗೂ ಹೊಸ ಪಾಲಿಕೆ ಮುಖ್ಯ ಕಚೇರಿ ನಿರ್ಮಾಣಕ್ಕೆ ರೂ.25 ಕೋಟಿ ಮೀಸಲಾಗಿದೆ.
ಚನ್ನಸಂದ್ರ, ಬಿಳೇಶಿವಾಲಯ, ಕೊತ್ತನೂರು, ಸೀತಾರಾಂಪಾಳ್ಯ, ಕುರುಡುಸೊನ್ನೆನಹಳ್ಳಿ, ಸೀಗೇಹಳ್ಳಿ, ಕಾಡುಗೋಡಿ ಮತ್ತು ನಲ್ಲೂರುಹಳ್ಳಿ ಪ್ರಮುಖ ರಸ್ತೆಗಳ ಅಗಲೀಕರಣಕ್ಕಾಗಿ ರೂ.40 ಕೋಟಿ ಮೀಸಲಾಗಿದೆ.
ಹಸಿರು ಪ್ರದೇಶಗಳ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯಡಿಯಲ್ಲಿ ರೂ,45 ಕೋಟಿ ಮೀಸಲಾಗಿದ್ದು, ಹೊಸ ನರ್ಸರಿ ಸ್ಥಾಪನೆ ಹಾಗೂ ಉದ್ಯಾನವನಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಕೆರೆಗಳ ನಿರ್ವಹಣೆ, ಅಭಿವೃದ್ಧಿ ಮತ್ತು ಭದ್ರತೆಗೆ ರೂ.58 ಕೋಟಿ ಮೀಸಲಿಡಲಾಗಿದ್ದು, ಪ್ರಾಣಿ ಆಶ್ರಯ ಕೇಂದ್ರಗಳು, ಶಸ್ತ್ರಚಿಕಿತ್ಸಾ ಆಸ್ಪತ್ರೆಗಳು ಮತ್ತು ಶವ ದಹನ ಕೇಂದ್ರಗಳಿಗೆ ರೂ.16.50 ಕೋಟಿ ನೀಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ 15 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ನಮ್ಮ ಕ್ಲಿನಿಕ್ಗಳ ನಿರ್ಮಾಣ, ಲಸಿಕಾ ಕಾರ್ಯಕ್ರಮ ಹಾಗೂ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ರೂ.50.86 ಕೋಟಿ ಮೀಸಲಾಗಿದೆ.
ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಾಸಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ರೂ,227 ಕೋಟಿ ಮೀಸಲಾಗಿದ್ದು, ಪೌರಕಾರ್ಮಿಕರು ಹಾಗೂ ದೀನದಲಿತ ಸಮುದಾಯಗಳ ಶೈಕ್ಷಣಿಕ ಸಬಲೀಕರಣಕ್ಕೂ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಬಜೆಟ್ ನಂತರ ಮಾತನಾಡಿದ ಆಯುಕ್ತರು, 100 ಕಿ.ಮೀ ಪಾದಚಾರಿ ಮಾರ್ಗ ಅಭಿವೃದ್ಧಿ, ಪರಿಣಾಮಕಾರಿ ಕಸ ನಿರ್ವಹಣೆ ಹಾಗೂ ಕೆರೆ-ಉದ್ಯಾನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಮೂಲಸೌಕರ್ಯ ಯೋಜನೆಯಡಿ ರಸ್ತೆಗಳಿಗೆ ಮೀಸಲಿಟ್ಟಿರುವ ಅನುದಾನ ಇಂತಿದೆ...
ಮಾರತಹಳ್ಳಿ ವಿಭಾಗ – ರೂ,30 ಕೋಟಿ
ದೊಡ್ಡನೆಕ್ಕುಂಡಿ– ರೂ.32.50 ಕೋಟಿ
ವೈಟ್ಫೀಲ್ಡ್ – ರೂ.17 ಕೋಟಿ
ಕಾಡುಗೋಡಿ – ರೂ.0.15 ಕೋಟಿ
ರಾಮಮೂರ್ತಿನಗರ – ರೂ.27.40 ಕೋಟಿ
ಕೆ.ಆರ್. ಪುರಂ – ರೂ.20.50 ಕೋಟಿ
ಹೊರಮಾವು – ರೂ.9 ಕೋಟಿ
ಎಚ್ಎಎಲ್ ವಿಮಾನ ನಿಲ್ದಾಣ ವಿಭಾಗ – ರೂ.3.10 ಕೋಟಿ
Advertisement