

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಿದುಳು ನಿಷ್ಕ್ರಿಯಗೊಂಡಿದ್ದ 43 ವರ್ಷದ ಮಹಿಳೆಯೊಬ್ಬರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶ್ರೀನಗರ ನಿವಾಸಿಯಾಗಿದ್ದ ಮಹಿಳೆ ಮೇ 1ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಶೇಖರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಮಹಿಳೆ ಜೀವ ರಕ್ಷಕ ವ್ಯವಸ್ಥೆಯಲ್ಲಿ ಇದ್ದರೂ ಯಾವುದೇ ಚೇತರಿಕೆಯ ಲಕ್ಷಣಗಳು ಕಾಣಿಸಲಿಲ್ಲ. ತಜ್ಞರ ಸಮಿತಿ ಎರಡು ಬಾರಿ ಮೆದುಳು ನಿಷ್ಕ್ರಿಯ ಪರೀಕ್ಷೆ ನಡೆಸಿ ಮೇ 6ರಂದು ಅವರನ್ನು ಬ್ರೇನ್ ಡೆಡ್ ಎಂದು ಘೋಷಿಸಿತು.
ಆಸ್ಪತ್ರೆಯ ಸಮಾಲೋಚನಾ ತಂಡದ ಮನವೊಲಿಕೆಯ ಬಳಿಕ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
ಪತಿಯ ಅನುಮತಿಯೊಂದಿಗೆ ಹೃದಯ, ಹೃದಯ ಕವಾಟಗಳು, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು, ಕಣ್ಣಿನ ಕಾರ್ನಿಯಾ ಹಾಗೂ ಚರ್ಮವನ್ನು ದಾನ ಮಾಡಲಾಯಿತು.
ಈ ಅಂಗಾಂಗಗಳು ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣವಾಗಲಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಇದು ವೈದ್ಯಕೀಯ-ಕಾನೂನು ಸಂಬಂಧಿತ ಪ್ರಕರಣವಾಗಿದ್ದರಿಂದ, ಅಂಗಾಂಗ ಸಂಗ್ರಹ ಪ್ರಕ್ರಿಯೆಗೂ ಮುನ್ನ ಪೊಲೀಸ್ ಹಾಗೂ ಫರೆನ್ಸಿಕ್ ಕ್ರಮಗಳನ್ನು ಪೂರ್ಣಗೊಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.
Advertisement