ನೀರಿನ ಅಭಾವ: ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಭಾರೀ ಹೊಡೆತ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು..!

ಜೀನ್ಸ್ ತೊಳೆಯುವಿಕೆ, ಡೈಯಿಂಗ್ ಹಾಗೂ ಫಿನಿಶಿಂಗ್ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಅಗತ್ಯವಾಗಿರುವುದರಿಂದ, ಈ ಸಂಕಷ್ಟ ಸ್ಥಳೀಯ ಉಡುಪು ಕೈಗಾರಿಕೆ ಮತ್ತು ಉದ್ಯೋಗ ಕ್ಷೇತ್ರದ ಮೇಲೂ ದೊಡ್ಡ ಪರಿಣಾಮ ಬೀರಿದೆ.
A denim washing unit in Ballari city
ಬಳ್ಳಾರಿ ಜೀನ್ಸ್ ಘಟಕ
Updated on

ಬಳ್ಳಾರಿ: ತೀವ್ರ ನೀರಿನ ಕೊರತೆಯಿಂದ ಬಳ್ಳಾರಿಯ ಜೀನ್ಸ್ ವಾಷಿಂಗ್ ಮತ್ತು ಪ್ರೊಸೆಸಿಂಗ್ ಕೈಗಾರಿಕೆ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಘಟಕಗಳು ಉತ್ಪಾದನೆಯನ್ನು ಕಡಿತಗೊಳಿಸಿದ್ದರೆ, ಕೆಲವು ಘಟಕಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 55ಕ್ಕೂ ಹೆಚ್ಚು ಜೀನ್ಸ್ ವಾಷಿಂಗ್ ಘಟಕಗಳು ಕಳೆದ ಎರಡು ವಾರಗಳಿಂದ ನೀರಿನ ಅಭಾವದಿಂದ ತೀವ್ರ ತೊಂದರೆ ಅನುಭವಿಸುತ್ತಿವೆ. ಕೆಲವೇ ಘಟಕಗಳು ಸೀಮಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಳಿದವು ನೀರಿನ ಟ್ಯಾಂಕರ್ ಲಭ್ಯತೆ ಆಧರಿಸಿ ಮಧ್ಯಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮಾಲೀಕರು ತಿಳಿಸಿದ್ದಾರೆ.

ಜೀನ್ಸ್ ತೊಳೆಯುವಿಕೆ, ಡೈಯಿಂಗ್ ಹಾಗೂ ಫಿನಿಶಿಂಗ್ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಅಗತ್ಯವಾಗಿರುವುದರಿಂದ, ಈ ಸಂಕಷ್ಟ ಸ್ಥಳೀಯ ಉಡುಪು ಕೈಗಾರಿಕೆ ಮತ್ತು ಉದ್ಯೋಗ ಕ್ಷೇತ್ರದ ಮೇಲೂ ದೊಡ್ಡ ಪರಿಣಾಮ ಬೀರಿದೆ.

ದಿನನಿತ್ಯದ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಆರ್ಡರ್‌ಗಳ ವಿತರಣೆ ವಿಳಂಬವಾಗುತ್ತಿದೆ. ಇದರಿಂದ ಆರ್ಥಿಕ ನಷ್ಟವೂ ಹೆಚ್ಚುತ್ತಿದೆ ಎಂದು ಮಾಲೀಕರು ಹೇಳಿದ್ದಾರೆ.

ಘಟಕ ಮಾಲೀಕರಾದ ಪೊಲಕ್ಸ್ ಮಲ್ಲಿಕಾರ್ಜುನ್ ಅವರು ಮಾತನಾಡಿ, “ಅನಿಯಮಿತ ನೀರು ಪೂರೈಕೆ ಮತ್ತು ಲಭ್ಯ ಮೂಲಗಳ ಕ್ಷೀಣತೆಯಿಂದ ಸಮಸ್ಯೆ ಉಂಟಾಗಿದೆ. ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಖಾಸಗಿ ಟ್ಯಾಂಕರ್‌ಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಕಾರ್ಯಾಚರಣಾ ವೆಚ್ಚ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

A denim washing unit in Ballari city
ಬಳ್ಳಾರಿ ಜೀನ್ಸ್ ಉದ್ಯಮಕ್ಕೆ KSPCB ಶಾಕ್: 36 ವಾಷಿಂಗ್‌ ಘಟಕಗಳಿಗೆ ಬೀಗ; ಸಾವಿರಾರು ಕಾರ್ಮಿಕರ ಭವಿಷ್ಯ ಅತಂತ್ರ..!

ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೂಡ ಕೆಲಸದ ಅವಧಿ ಕಡಿಮೆಯಾಗಿರುವುದು ಮತ್ತು ವೇತನದ ಅನಿಶ್ಚಿತತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಕೈಗಾರಿಕಾ ಪ್ರದೇಶಗಳಿಗೆ ಸಮರ್ಪಕ ನೀರು ಪೂರೈಕೆ ಕಲ್ಪಿಸಬೇಕೆಂದು ಜೀನ್ಸ್ ತಯಾರಿಕಾ ಘಟಕಗಳ ಮಾಲೀಕರು ಒತ್ತಾಯಿಸಿದ್ದಾರೆ.

ತಾತ್ಕಾಲಿಕವಾಗಿ ಟ್ಯಾಂಕರ್ ವ್ಯವಸ್ಥೆ ಹಾಗೂ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕೆಂದು ಮನವಿ ಮಾಡಿದ್ದಾರೆ.

ಬಳ್ಳಾರಿಯ ಈ ಕೈಗಾರಿಕೆ ನೇರ ಹಾಗೂ ಪರೋಕ್ಷವಾಗಿ ನೂರಾರು ಕಾರ್ಮಿಕರ ಜೀವನೋಪಾಯಕ್ಕೆ ಆಧಾರವಾಗಿದ್ದು, ಸಮಸ್ಯೆ ಮುಂದುವರಿದರೆ ಸ್ಥಳೀಯ ಆರ್ಥಿಕತೆ ಮತ್ತು ಸಣ್ಣ ವ್ಯಾಪಾರಗಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮದ ಪಾಲುದಾರರು ಎಚ್ಚರಿಸಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಆದ್ಯತೆಯ ಮೇಲೆ ಬಿಕ್ಕಟ್ಟನ್ನು ಪರಿಹರಿಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com