

ಬೆಂಗಳೂರು: ಮಣಿಪುರದ 23 ವರ್ಷದ ಮಹಿಳೆಯೊಬ್ಬರು ಇಲ್ಲಿನ ಐಐಎಂ ಕ್ಯಾಂಪಸ್ನಲ್ಲಿ ವಾಸವಾಗಿರುವ ದಂಪತಿ ತನಗೆ ಹಲವಾರು ಬಾರಿ ಕಿರುಕುಳ ನೀಡಿದ್ದಾರೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆಪಾದಿತ ಅಪರಾಧಗಳು ಜೂನ್ 1, 2021 ಮತ್ತು ಮೇ 4, 2026ರ ನಡುವೆ ನಡೆದಿವೆ ಎಂದು ದೂರಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ತನ್ನ ದೂರಿನಲ್ಲಿ, ತಾನು ಸುಮಾರು ಆರು ವರ್ಷಗಳಿಂದ ಅಮರ್ ಮತ್ತು ಅಂಶು ಅವರ ಮಕ್ಕಳ ಆರೈಕೆದಾರಳಾಗಿ ಕೆಲಸ ಮಾಡುತ್ತಿದ್ದೇನೆ. ಅವರೊಂದಿಗೆ ಐಐಎಂ-ಬಿ ಕ್ಯಾಂಪಸ್ನಲ್ಲಿ ವಾಸಿಸುತ್ತಿದ್ದೇನೆ. 2021ರಿಂದ, ಉದ್ಯೋಗದಾತರು ನನಗೆ ಸಾಕಷ್ಟು ಆಹಾರ ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ತಾನು ಅನಾರೋಗ್ಯಕ್ಕೆ ಒಳಗಾದಾಗಲೆಲ್ಲ ಅವರು ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಮೊಬೈಲ್ ಫೋನ್ ಕಸಿದುಕೊಳ್ಳುತ್ತಿದ್ದರು. ಘಟನೆಗಳು ನಡೆದ ನಿಖರವಾದ ದಿನಾಂಕಗಳು ಮತ್ತು ಸಮಯಗಳು ತನಗೆ ನೆನಪಿಲ್ಲ. ಆದರೆ, ದಂಪತಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 15 ರಂದು ಬೆಳಗಿನ ಜಾವ 2.30ರ ಸುಮಾರಿಗೆ ಕೊನೆಯದಾಗಿ ಹಲ್ಲೆ ನಡೆದಿದ್ದು, ಅಂಶು ತನ್ನ ಕೂದಲನ್ನು ಎಳೆದು ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎಫ್ಐಆರ್ ಪ್ರಕಾರ, ಆಕೆ ಇತರರೊಂದಿಗೆ ಮಾತನಾಡಿದಾಗಲೆಲ್ಲ ಅವರು ತನ್ನ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ. ಆದರೆ, ಭಯದಿಂದ ಈವರೆಗೂ ಯಾರಿಗೂ ತಿಳಿಸಿರಲಿಲ್ಲ. ತನ್ನ ಮೊಬೈಲ್ ಫೋನ್ನಲ್ಲಿ ಸಂದೇಶಗಳನ್ನು ಪರಿಶೀಲಿಸುತ್ತಿದ್ದರು ಮತ್ತು ಹೊರಗೆ ಹೋಗದಂತೆ ತಡೆಯುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮೇ 4 ರಂದು ಬೆಳಿಗ್ಗೆಯಿಂದ ತನಗೆ ಆಹಾರ ನೀಡಿಲ್ಲ. ನಂತರ ನೆರೆಹೊರೆಯವರಿಂದ ಸಹಾಯ ಕೇಳಿದಾಗ, ಅವರು ತನಗೆ ಆಹಾರ ನೀಡಿದರು. ನೆರೆಯವರ ಫೋನ್ ಬಳಸಿ, ಬೆಂಗಳೂರಿನಲ್ಲಿ ವಾಸಿಸುವ ಮತ್ತು ಬೆಂಗಳೂರಿನ ಕುಕಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿರುವ ತನ್ನ ಚಿಕ್ಕಮ್ಮನಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದಿದ್ದಾರೆ.
ಮಹಿಳೆಯ ದೂರಿನ ಮೇರೆಗೆ, ಮೇ 6 ರಂದು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 127(4) (ಅಕ್ರಮ ಬಂಧನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
'ಎಲ್ಲ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಈ ಬಗ್ಗೆ ಸದ್ಯ ವಿಸ್ತೃತ ತನಿಖೆ ನಡೆಯುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement