

ಬೆಂಗಳೂರು: ರಾಜ್ಯ ಸರ್ಕಾರ ಬುಧವಾರ ಬೆಂಗಳೂರಿನ ಜನತೆಗೆ ಆರನೇ ಗ್ಯಾರಂಟಿ ಘೋಷಿದ್ದು, ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಆಸ್ತಿ ಮೇಲಿನ ಗೈಡ್ಲೈನ್ಸ್ ವ್ಯಾಲ್ಯೂ ಅನ್ನು ಶೇ. 2ಕ್ಕೆ ಇಳಿಕೆ ಮಾಡಿದೆ.
ಇಂದು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜ್ಯ ಸರ್ಕಾರವು ಬಿ ಖಾತಾವನ್ನು ಎ ಖಾತಾ ಆಗಿ ಪರಿವರ್ತಿಸಲು 100 ದಿನಗಳ "ಸುವರ್ಣ ಅವಕಾಶ"ವನ್ನು ನೀಡುತ್ತಿದೆ. ಅಲ್ಲದೆ ಆಸ್ತಿ ಮೇಲಿನ ಗೈಡ್ಲೈನ್ಸ್ ವ್ಯಾಲ್ಯೂ ಅನ್ನು ಶೇಕಡಾ 5 ರ ಬದಲಿಗೆ ಶೇಕಡಾ 2 ಕ್ಕೆ ಇಳಿಸಿದ್ದು, ಈ ಉಪಕ್ರಮವು ಒಟ್ಟು ಶೇಕಡಾ 60 ರಷ್ಟು ರಿಯಾಯಿತಿಯನ್ನು ನೀಡುತ್ತದೆ ಎಂದರು.
"ಇಂದು, ಒಂದು ವಿಶೇಷ ಘೋಷಣೆ ಇದೆ. ಬೆಂಗಳೂರಿನ ಜನತೆಗೆ ನಾವು 100 ದಿನಗಳ ಅವಧಿಗೆ 'ಸುವರ್ಣ ಅವಕಾಶ'ವನ್ನು ನೀಡುತ್ತಿದ್ದೇವೆ. ಸಾಮಾನ್ಯವಾಗಿ, ಬಿ-ಖಾತಾವನ್ನು ಎ-ಖಾತಾ ಆಗಿ ಪರಿವರ್ತಿಸಲು ಶೇ. ರಷ್ಟು ಶುಲ್ಕದ ಅಗತ್ಯವಿದೆ. ಆದಾಗ್ಯೂ, ಈ 100 ದಿನಗಳವರೆಗೆ, ಅರ್ಜಿ ಸಲ್ಲಿಸಿ ಸರಿಯಾದ ದಾಖಲೆಗಳನ್ನು ಒದಗಿಸುವ ನಾಗರಿಕರಿಗೆ ಕೇವಲ ಶೇ. 2 ರಷ್ಟು ಶುಲ್ಕ, ಅಂದರೆ ಶೇ. 60 ರಿಯಾಯಿತಿ ನೀಡಲಾಗುತ್ತದೆ" ಎಂದು ಡಿಸಿಎಂ ಹೇಳಿದರು.
"ಉದಾಹರಣೆಗೆ, ಒಂದು ಆಸ್ತಿಯ ಮೌಲ್ಯ 1 ಕೋಟಿ ರೂಪಾಯಿಗಳಾಗಿದ್ದರೆ, ಶುಲ್ಕ ಸಾಮಾನ್ಯವಾಗಿ 5 ಲಕ್ಷ ರೂಪಾಯಿಗಳಾಗಿರುತ್ತದೆ; ಆದರೆ ಈ ಯೋಜನೆಯಡಿಯಲ್ಲಿ, ಅದನ್ನು ಕೇವಲ 2 ಲಕ್ಷ ರೂಪಾಯಿಗಳಿಗೆ ಇಳಿಸಲಾಗುತ್ತದೆ" ಎಂದು ಅವರು ಹೇಳಿದರು.
2.3 ಮಿಲಿಯನ್ ಮಾಲೀಕರಿಗೆ ಅವರ ಮನೆ ಬಾಗಿಲಲ್ಲೇ ಆಸ್ತಿ ಹಕ್ಕುಗಳನ್ನು ಪಡೆಯಲು "ನಮ್ಮ ಖಾತೆ, ನಮ್ಮ ಹಕ್ಕು" ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅವಕಾಶ ಕೊಡುತ್ತೇವೆ.ಒಟ್ಟು 7 ಲಕ್ಷ ಬಿ ಖಾತೆಗಳಿದ್ದು, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ ಮಾಡುತ್ತೇವೆ. ನಗರದಲ್ಲಿ ಕೆಲವರು ಪ್ಲ್ಯಾನ್ ಇಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತಹವರ ಅನುಕೂಲಕಕ್ಕಾಗಿ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಪ್ರತಿ ಶನಿವಾರ ನನ್ನ ಖಾತಾ - ನನ್ನ ಹಕ್ಕು ಅಭಿಯಾನ
ಮೇ 16 ರಿಂದ ಪ್ರತಿ ಶನಿವಾರ "ನನ್ನ ಖಾತಾ - ನನ್ನ ಹಕ್ಕು" (ಇ-ಖಾತಾ ಸಿಟಿಜನ್ ಓಪನ್ ಹೌಸ್) ಅಭಿಯಾನ ಆರಂಭವಾಗಲಿದೆ. 5 ನಗರ ಪಾಲಿಕೆಗಳ ವಾರ್ಡ್ ಕಚೇರಿ, ಶಾಲೆ ಆವರಣಗಳು ಸೇರಿ 50 ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಶನಿವಾರ ಸುಮಾರು 5000 ಜನರಿಗೆ ನೇರ ನೆರವು ನೀಡುವ ಗುರಿ ಹೊಂದಲಾಗಿದೆ. ಈ ಅಭಿಯಾನದಲ್ಲಿ ಆಸ್ತಿ ಸಂಬಂಧಿಸಿದ 3 ಸೇವೆಗಳು ಲಭ್ಯವಾಗಲಿವೆ ಎಂದರು.
ಕಟ್ಟಡ ಉಲ್ಲಂಘನೆ ಮಿತಿ ಶೇ. 15ಕ್ಕೆ ಹೆಚ್ಚಳ
ಬೆಂಗಳೂರಿನ ಬಹುತೇಕ ಕಟ್ಟಡ ಮಾಲೀಕರಿಗೆ ತಲೆನೋವಾಗಿದ್ದ ಸ್ವಾಧೀನಾನುಭವ ಪ್ರಮಾಣ ಪತ್ರ(ಒಸಿ) ಸಮಸ್ಯೆಗೆ ಸರ್ಕಾರ ಇತಿಶ್ರೀ ಹಾಡಿದೆ. ಈ ಹಿಂದೆ ಕಟ್ಟಡ ನಿರ್ಮಾಣದಲ್ಲಿ (ನಡುಜಾಗ, ಕವರೇಜ್, FAR ಇತ್ಯಾದಿ) ಕೇವಲ ಶೇ. 5ರಷ್ಟು ಉಲ್ಲಂಘನೆಗೆ ಮಾತ್ರ ದಂಡ ವಿಧಿಸಿ ಒಸಿ (ಒಸಿ) ನೀಡಲಾಗುತ್ತಿತ್ತು. ಆದರೆ, ಬಹುತೇಕ ಕಟ್ಟಡಗಳು ಶೇ.5ಕ್ಕಿಂತ ಹೆಚ್ಚು ಉಲ್ಲಂಘನೆ ಮಾಡಿದ್ದವು. ಡಿಸೆಂಬರ್ 17, 2024ರ ಸುಪ್ರೀಂಕೋರ್ಟ್ ಆದೇಶದಂತೆ, ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವುದನ್ನು ನಿಷೇಧಿಸಲಾಗಿತ್ತು. ಇದರಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು.
Advertisement