

ಬೆಂಗಳೂರು: ಥಣಿಸಂದ್ರದಲ್ಲಿರುವ ಮಣಿಪಾಲ್ ಅಕಾಡೆಮಿ ಆಫ್ ಬಿಎಫ್ಎಸ್ಐನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್(NISM) ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ 24 ವರ್ಷದ ಪದವಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಮೃತಪಟ್ಟಿದ್ದು, ಇದನ್ನು ಖಂಡಿಸಿ ಕ್ಯಾಂಪಸ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾರಿ ಪ್ರತಿಭಟನೆಗೆ ನಡೆಸಿದರು.
ಮೃತ ವಿದ್ಯಾರ್ಥಿಯನ್ನು ಬಿಹಾರ ಮೂಲದ ಚಿನ್ನು ಕುಮಾರ್ ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ 2.30 ರ ಸುಮಾರಿಗೆ ಸಂಸ್ಥೆಯ ಹಾಸ್ಟೆಲ್ನ ಕಿಟಕಿಯ ಗ್ರಿಲ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಚಿನ್ನು ಕುಮಾರ್ ಶವ ಪತ್ತೆಯಾಗಿದೆ. ಶವವನ್ನು ನೋಡಿದ ವಿದ್ಯಾರ್ಥಿಗಳು ತಕ್ಷಣ ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ನಿರ್ಧಾರಕ್ಕೆ ಆಡಳಿತ ಮಂಡಳಿಯ ಕಿರುಕುಳ ಕಾರಣ ಎಂದು ಆರೋಪಿಸಿ ಸೋಮವಾರ ರಾತ್ರಿಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಂಗಳವಾರ, ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಮತ್ತು ಫಲಕಗಳನ್ನು ಪ್ರದರ್ಶಿಸುತ್ತಾ ಕ್ಯಾಂಪಸ್ನಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿದರು.
ಕುಮಾರ್ ಅವರ ಪೋಷಕರು ಇನ್ನೂ ಬೆಂಗಳೂರಿಗೆ ಬಂದಿಲ್ಲ. ಆದರೆ ದೂರಿನ ಆಧಾರದ ಮೇಲೆ, ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಕುಮಾರ್, NISM ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾಗ ಗುತ್ತಿಗೆ ಆಧಾರದ ಮೇಲೆ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಎರಡು ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು ಮತ್ತು ಆಡಳಿತ ಮಂಡಳಿಯು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
TNIE ಜೊತೆ ಮಾತನಾಡಿದ ವಿದ್ಯಾರ್ಥಿಯೊಬ್ಬ, ಆಡಳಿತ ಮಂಡಳಿಯಿಂದ ಅವಮಾನ ಮತ್ತು ಮಾನಸಿಕ ಕಿರುಕುಳದಿಂದ, ಕುಮಾರ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಯ ಪ್ರಕಾರ, ಕುಮಾರ್ NISM ಪರೀಕ್ಷೆಗಾಗಿ ನಾಲ್ಕು ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮಕ್ಕೆ ಮಣಿಪಾಲ ಅಕಾಡೆಮಿ ಸೇರಿದ್ದರು. ಅವರು ಏಳು ಬಾರಿ ಪರೀಕ್ಷೆ ಬರೆದಿದ್ದರು ಮತ್ತು ಪ್ರತಿ ಪ್ರಯತ್ನದಲ್ಲಿಯೂ ಒಂದು ಅಂಕದ ಅಂತರದಲ್ಲಿ ಫೇಲ್ ಆಗಿದ್ದರು ಎಂದು ವರದಿಯಾಗಿದೆ.
ಇದರ ನಂತರ, ಆಡಳಿತ ಮಂಡಳಿಯು ಕುಮಾರ್ ಅವರ ಸ್ಟೈಫಂಡ್ ಅನ್ನು ನಿಲ್ಲಿಸುವಂತೆ ಖಾಸಗಿ ಬ್ಯಾಂಕ್ ಗೆ ಸೂಚಿಸಿತ್ತು ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಕುಮಾರ್ ಅವರನ್ನು ಆಡಳಿತ ಮಂಡಳಿಯು ಅವಮಾನಿಸಿದೆ ಮತ್ತು ಮಾನಸಿಕವಾಗಿ ಒತ್ತಡ ಹೇರಿದೆ ಎಂದು ಅವರು ಆರೋಪಿಸಿದ್ದಾರೆ.
ಪರೀಕ್ಷೆಯಲ್ಲಿ ಬೇಕಂತಲೆ ಫೇಲ್ ಮಾಡಿದ್ದಲ್ಲದೆ, ಎಲ್ಲರ ಮುಂದೆ ಅವಮಾನ ಮಾಡಲಾಗಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.
Advertisement