

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುರಿತ ಉಹಾಪೋಹಗಳಿಗೆ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಫುಲ್ ಸ್ಟಾಪ್ ಹಾಕಿದ್ದು, 'ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ' ಎಂದು ಹೇಳಿದ್ದಾರೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಬಿರುಸು ಪಡೆದಿದೆ. ಸಿಎಂ ಸಿದ್ದರಾಮಯ್ಯ ಪಟ್ಟ ಬಿಡುವುದು ಬಹುತೇಕ ಖಚಿತವಾಗಿದೆ. ಲಭ್ಯ ಮಾಹಿತಿಗಳ ಪ್ರಕಾರ ನಾಳೆ (ಮೇ28) ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ದೆಹಲಿ ಸಭೆ ಬಳಿಕ ಯಾವುದೇ ಶಾಸಕರು, ಸಚಿವರು ಸಿಎಂ ರಾಜೀನಾಮೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಈ ಮಧ್ಯೆ ಆರ್ ವಿ ದೇಶಪಾಂಡೆ, ಸಿದ್ದರಾಮಯ್ಯನವರ ರಾಜೀನಾಮೆಯನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ಸಚಿವರಾಗಿರುವ ದೇಶಪಾಂಡೆ ಅವರು ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಈ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆರ್ ವಿ ದೇಶಪಾಂಡೆ, 'ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತೀನಿ ಅಂತ ಹೇಳಿ ಬಂದಿದ್ದಾರೆ. ನಾವು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೊಡಬೇಡಿ ಅಂತ ಹೇಳಿದ್ದೇವೆ. ಆದರೆ, ಅವರು ರಾಜೀನಾಮೆ ಕೊಡ್ತೀನಿ ಅಂತ ದೆಹಲಿಯಲ್ಲಿ ಹೇಳಿ ಬಂದಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ದೆಹಲಿಯಿಂದ ಬಂದ ಮೇಲೆ ನಮ್ಮನ್ನು ಭೇಟಿಯಾದಾಗ, 'ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ' ಅಂತ ಹೇಳಿ ಬಂದಿದ್ದಾರೆ ಎಂದರು. ನಾಳೆಯೇ (ಗುರುವಾರ) ರಾಜೀನಾಮೆ ಕೊಡ್ತೀವಿ ಅಂತ ಸಿಎಂ ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ನಾವುಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಅಂತ ಬಲವಂತವಾಗಿ ಹೇಳಿದ್ದೇವೆ" ಎಂದು ದೇಶಪಾಂಡೆ ತಿಳಿಸಿದ್ದಾರೆ.
ಹೈಕಮಾಂಡ್ ಗೆ ಮಾತು ಕೊಟ್ಟಿದ್ದೇನೆ
ಮೂಲಗಳ ಪ್ರಕಾರ, ಹಲವು ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ನಡೆಸಿದರು.
ಅವರು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿ, ಈ ವಿಷಯವನ್ನು ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ ಕೆಲವು ಶಾಸಕರು ಅವರು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದಾಗ, ತಾವು ಹೈಕಮಾಂಡ್ಗೆ ಮಾತು ಕೊಟ್ಟಿದ್ದು ಅದನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಉತ್ತರಿಸಿದರು ಎಂದು ಅವರು ಹೇಳಿದರು.
ಊಹಾಪೋಹಕ್ಕೆ ತೆರೆ
ಇದುವರೆಗೆ ಕೇವಲ ಊಹಾಪೋಹವಾಗಿದ್ದ ರಾಜೀನಾಮೆ ಸುದ್ದಿಗೆ ದೇಶಪಾಂಡೆ ಅವರ ಈ ಹೇಳಿಕೆ ಈಗ ಅಧಿಕೃತ ಮುದ್ರೆ ಒತ್ತಿದಂತಾಗಿದೆ.
ರಾಜೀನಾಮೆಗೆ ಕ್ಷಣಗಣನೆ ಆರಂಭ
ಆರ್.ವಿ. ದೇಶಪಾಂಡೆ ಅವರ ಸ್ಪಷ್ಟ ಉಲ್ಲೇಖ ಮತ್ತು ಎಚ್.ಕೆ. ಪಾಟೀಲ್ ಅವರು ವಿವರಿಸಿದ ಸಿಎಂ ಅವರ ಮೌನವನ್ನು ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ಸಂಪೂರ್ಣವಾಗಿ ತಲೆಬಾಗಿದ್ದಾರೆ ಮತ್ತು ನಾಳೆ ಜಂಟಿ ಸುದ್ದಿಗೋಷ್ಠಿಯ ಬಳಿಕ ರಾಜೀನಾಮೆ ರಾಜಭವನ ತಲುಪುವುದು ಖಚಿತ ಎನ್ನಲಾಗಿದೆ.
Advertisement