

ಬೆಂಗಳೂರು: ಕೆಆರ್ಪುರಂ ಸಮೀಪದ ಲೋರಿ ಅಂಡರ್ಬ್ರಿಡ್ಜ್ನಲ್ಲಿ ರೈಲ್ವೆ ಸೇತುವೆಯ ಸ್ಲ್ಯಾಬ್ ಬದಲಾವಣೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಜೂನ್ 4ರಿಂದ ಜೂನ್ 9ರವರೆಗೆ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಈ ಸಂಬಂಧ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಕಟಣೆ ಹೊರಡಿಸಿದ್ದು, ಲೋರಿ ಅಂಡರ್ಬ್ರಿಡ್ಜ್ ಮೂಲಕ ಕೆಆರ್ಪುರಂ, ರಾಮಮೂರ್ತಿನಗರ ಹಾಗೂ ಐಟಿಐ ಕಾಲೋನಿಯ ಕಡೆಗೆ ಹೋಗುವ ರಸ್ತೆ ಆರು ದಿನಗಳ ಕಾಲ ಸಂಪೂರ್ಣ ಬಂದ್ ಆಗಿರಲಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯವಾಗಿ ಕೆಆರ್ಪುರಂ ಕೇಬಲ್ ಸ್ಟೇಡ್ ಬ್ರಿಡ್ಜ್ ಬಳಸುವಂತೆ ಸೂಚಿಸಲಾಗಿದೆ.
ಅದೇ ರೀತಿ, ಲೋರಿ ಅಂಡರ್ಬ್ರಿಡ್ಜ್ ಮೂಲಕ ಐಟಿಪಿಎಲ್ ಹಾಗೂ ವೈಟ್ಫೀಲ್ಡ್ ಕಡೆಗೆ ತೆರಳುವ ರಸ್ತೆಯೂ ಜೂನ್ 4ರಿಂದ 9ರವರೆಗೆ ಮುಚ್ಚಲ್ಪಡಲಿದೆ.
ವೈಟ್ಫೀಲ್ಡ್ ಮತ್ತು ಐಟಿಪಿಎಲ್ ಭಾಗಗಳಿಗೆ ತೆರಳುವವರು ಕೂಡ ಕೆಆರ್ಪುರಂ ಕೇಬಲ್ ಸ್ಟೇಡ್ ಬ್ರಿಡ್ಜ್ ಮೂಲಕ ಸಂಚರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಜೂನ್ 7ರ ಸಂಜೆ 6 ಗಂಟೆಯಿಂದ ಜೂನ್ 8ರ ಬೆಳಗ್ಗೆ 6 ಗಂಟೆಯವರೆಗೆ ಕೆಆರ್ಪುರಂ–ಐಟಿಪಿಎಲ್ ಮುಖ್ಯರಸ್ತೆಯಲ್ಲಿ ವೈಟ್ಫೀಲ್ಡ್ ಕಡೆಗೆ ಸಾಗುವ ವಾಹನ ಸಂಚಾರಕ್ಕೂ ತಾತ್ಕಾಲಿಕ ನಿರ್ಬಂಧ ಹೇರಲಾಗುತ್ತಿದೆ. ಈ ಅವಧಿಯಲ್ಲಿ ವಾಹನಗಳು ರೋಡ್ ಅಂಡರ್ ಬ್ರಿಡ್ಜ್ (RUB) ಮಾರ್ಗದ ಮೂಲಕ ಸಾಗಬೇಕಾಗುತ್ತದೆ.
ರೈಲ್ವೆ ಅಧಿಕಾರಿಗಳು ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಸಂಚಾರ ಮಾರ್ಗ ಬದಲಾವಣೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ವಿಶೇಷವಾಗಿ ಕೆಆರ್ಪುರಂ, ರಾಮಮೂರ್ತಿನಗರ, ಐಟಿಐ ಕಾಲೋನಿ, ಐಟಿಪಿಎಲ್ ಮತ್ತು ವೈಟ್ಫೀಲ್ಡ್ ಭಾಗಗಳಿಗೆ ತೆರಳುವವರು ಹೆಚ್ಚುವರಿ ಪ್ರಯಾಣ ಸಮಯವನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
Advertisement