

ಬೆಂಗಳೂರು: ರಾಜಧಾನಿಯ ಮಾಂಸಾಹಾರ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್; ಅದುವೇ, ಇದೇ ತಿಂಗಳ 3 ಹಾಗೂ 4 ರಂದು ನಗರದಲ್ಲಿ ಸಾವಿರಾರು ಚಿಕನ್ ಅಂಗಡಿಗಳು ಬಂದ್ ಆಗಲಿದೆ. ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ (BSWML) ಜಾರಿಗೆ ತಂದಿರುವ ಕೋಳಿ ತ್ಯಾಜ್ಯ ಸಂಗ್ರಹಣೆ ನಿಯಮ ಹಾಗೂ ಶುಲ್ಕ ನೀತಿಯನ್ನು ವಿರೋಧಿಸಿ, ನಗರದ 6 ರಿಂದ 7 ಸಾವಿರ ಚಿಕನ್ ಅಂಗಡಿ ಮಾಲೀಕರು ಎರಡು ದಿನಗಳ ಕಾಲ ಬಂದ್ ಆಚರಿಸಲು ನಿರ್ಧರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಬೆಂಗಳೂರಿನಲ್ಲಿ ಕೋಳಿ ಮಾಂಸ ತ್ಯಾಜ್ಯ (ಕೋಳಿ ಪುಕ್ಕ, ಮೂಳೆ ಇತ್ಯಾದಿ) ಸಂಗ್ರಹಣೆ ಹಾಗೂ ವಿಲೇವಾರಿ ವಿಚಾರವಾಗಿ ಮಾಂಸದ ವ್ಯಾಪಾರಿಗಳು ಮತ್ತು BSWML ನಡುವೆ ಭಾರಿ ಸಂಘರ್ಷ ಶುರುವಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಾಂಸ ತ್ಯಾಜ್ಯ ಸಂಗ್ರಹಿಸಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಆದರೆ ಈ ಖಾಸಗಿ ಏಜೆನ್ಸಿಗಳು ಅಂಗಡಿ ಮಾಲೀಕರಿಂದ ಪ್ರತಿ ಕೆಜಿ ತ್ಯಾಜ್ಯಕ್ಕೆ 5 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದುವರೆದು, ಮಾಂಸದ ತ್ಯಾಜ್ಯವು ಅನುಪಯುಕ್ತ ವಸ್ತುವಲ್ಲ, ಬದಲಿಗೆ ಅದನ್ನು ಸಾಕುಪ್ರಾಣಿಗಳ ಆಹಾರ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಕಚ್ಚಾವಸ್ತುವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ತ್ಯಾಜ್ಯದಿಂದ ಖಾಸಗಿ ಕಂಪನಿಗಳು ಲಾಭ ಗಳಿಸುತ್ತಿರುವಾಗ, ನಮ್ಮಿಂದಲೇ ಸಂಗ್ರಹಣಾ ಶುಲ್ಕ ವಸೂಲಿ ಮಾಡುವುದು ಎಷ್ಟು ಸರಿ ಎಂಬುದು ಅಂಗಡಿ ಮಾಲೀಕರ ಪ್ರಶ್ನೆಯಾಗಿದೆ. ವಾಣಿಜ್ಯ ಮೌಲ್ಯವಿರುವ ಈ ಕಚ್ಚಾವಸ್ತುವಿಗೆ ಕಂಪನಿಗಳೇ ನಮಗೆ ಹಣ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ!
ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನಗರದ ಮಾಂಸದ ಅಂಗಡಿಗಳನ್ನು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಲು ವ್ಯಾಪಾರಿಗಳ ಸಂಘಟನೆಗಳು ನಿರ್ಧರಿಸಿವೆ. ಇದರ ಜೊತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘಟನೆ ತಿಳಿಸಿದೆ. ಇದರಿಂದ ಗ್ರಾಹಕರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಕೋಳಿ ಮಾಂಸದ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ಈ ಬಂದ್ ಜಾರಿಯಾದರೆ ಬೆಂಗಳೂರಿನಾದ್ಯಂತ ಚಿಕನ್, ಮಟನ್ ಸೇರಿದಂತೆ ತಾಜಾ ಮಾಂಸದ ಲಭ್ಯತೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.