

ಬೆಂಗಳೂರು: ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ 30 ವರ್ಷದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿ, ನಾಲ್ಕು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ಬೆಂಗಳೂರು ನಡೆದಿದೆ. ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬೆದರಿಸಿದ್ದಾರೆ. ಅಲ್ಲದೇ ಹಣ ಪಾವತಿಸುವಂತೆ ಒತ್ತಡ ಹೇರಲು ಆಕೆಯ ಅರೆ ಬೆತ್ತಲೆ ಸ್ಥಿತಿಯ ವಿಡಿಯೋ ಮಾಡಿದ್ದಾರೆ ಆರೋಪಿಸಲಾಗಿದೆ.
ಕೆಲಸ ಮತ್ತು ಹಣ ನೀಡುವುದಾಗಿ ನಂಬಿಸಿ ಬೇರೆ ಸ್ಥಳಕ್ಕೆ ಕರೆದೊಯ್ದ ನಂತರ, ಆಕೆಯನ್ನು ಕುಂಬಳಗೋಡಿನ ಮನೆಯೊಂದರಲ್ಲಿ ಕೂಡಿಹಾಕಲಾಗಿತ್ತು ಎಂದು ಎಫ್ಐಆರ್ (FIR) ತಿಳಿಸಿದೆ. ಅಪಹರಣ, ಅಕ್ರಮ ಬಂಧನ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಚಂದ್ರ ಲೇಔಟ್ ಪೊಲೀಸರು ಶುಕ್ರವಾರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 140(2), 127(3), 74, 76, 137(1), 118(1), 324(4), 352, 351(2), 351(3) ಮತ್ತು 190 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(E) ಅಡಿಯಲ್ಲಿ ಈ ಪ್ರಕರಣವನ್ನು (Cr. No. 283/2026) ದಾಖಲಿಸಲಾಗಿದೆ.
FIR ನಲ್ಲಿ ಏನಿದೆ? ಆಗಸ್ಟ್ 31 ರಂದು ದಾಖಲಾದ ಎಫ್ಐಆರ್ ಪ್ರಕಾರ, ದೂರುದಾರರು ಸುಮಾರು ಎರಡು ವರ್ಷಗಳ ಹಿಂದೆ ನಜತ್ ಬೇಗಂ ಅವರಿಂದ ವಾರದ ಕಂತಿನ ಆಧಾರದ ಮೇಲೆ 50,000 ರೂ. ಮತ್ತು ರೇಷ್ಮಾ ಬಾನು ಅವರಿಂದ ಮಾಸಿಕ ಬಡ್ಡಿ ಆಧಾರದ ಮೇಲೆ 1 ಲಕ್ಷ ರೂ. ಸಾಲ ಪಡೆದಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಕಳೆದ ಕೆಲವು ವಾರಗಳಿಂದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ.ಕೆಲಸ ಮತ್ತು ಹಣ ನೀಡುವುದಾಗಿ ಹೇಳಿ ನಜತ್ ಅವರು ಆಕೆಯನ್ನು ಮೆಟ್ರೋ ಲೇಔಟ್ನಲ್ಲಿರುವ ತಮ್ಮ ಮನೆಗೆ ಆಗಸ್ಟ್ 27 ರಂದು ಕರೆಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಅಂದುಸಂಜೆ 5.30 ರ ಸುಮಾರಿಗೆ ತಮ್ಮ ಅಪ್ರಾಪ್ತ ಮಗನೊಂದಿಗೆ ಆ ಮನೆಗೆ ಹೋದ ನಂತರ ರೇಷ್ಮಾ ಬಾನು, ಆಕೆಯ ಪತಿ ಸುಹೇಲ್ ಮತ್ತಿಬರು ಮನೆಗೆ ಪ್ರವೇಶಿಸಿ ಬಾಗಿಲು ಹಾಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಡ್ಡಿ ಸೇರಿದಂತೆ 11 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ಚಾಕುವಿನಿಂದ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಆಕೆಯ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹಾನಿಗೊಳಿಸಿದರು.
ಸಂಜೆ 7 ಗಂಟೆ ಸುಮಾರಿಗೆ ಮಹಿಳೆ ಮತ್ತು ಆಕೆಯ ಮಗುವನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿ ಕುಂಬಳಗೋಡಿನ ಮನೆಯೊಂದಕ್ಕೆ ಕರೆದೊಯ್ಯಲಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಮನೆಯ ಮೊದಲ ಮಹಡಿ ರೇಷ್ಮಾಗೆ ಸೇರಿದ್ದಾಗಿದೆ. ತನ್ನನ್ನು ದೊಣ್ಣೆಯಿಂದ ಹೊಡೆಯಲಾಗಿದೆ, ನಿಂದಿಸಲಾಗಿದೆ ಮತ್ತು ಮನೆಯಲ್ಲಿದ್ದ ಒಂದು ಕೋಣೆಯಲ್ಲಿ ಕೂಡಿಹಾಕಲಾಗಿದೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.
ಆರೋಪಿಗಳು ಆಗಸ್ಟ್ 29 ರಂದು ಆಕೆಯನ್ನು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದು, ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿದ್ದಾರೆ. ಹಣ ನೀಡದಿದ್ದರೆ ಆ ವಿಡಿಯೋವನ್ನು ವೈರಲ್ ಮಾಡುವುದಾಗಿ ಅವರು ಬೆದರಿಕೆ ಹಾಕಿದ್ದಾರೆ. ಹಣ ವಸೂಲಿ ಮಾಡಲು ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುವುದಾಗಿ ಸುಹೇಲ್ ಬೆದರಿಕೆ ಹಾಕಿದ್ದಾಗಿ ಎಫ್ಐಆರ್ನಲ್ಲಿ (FIR) ಉಲ್ಲೇಖಿಸಲಾಗಿದೆ. ಆಗಸ್ಟ್ 29 ರಂದು ತನ್ನ ಹಿರಿಯ ಮಗನನ್ನು ತಾಯಿಯ ಮನೆಗೆ ಕಳುಹಿಸಲಾಯಿತು ಮತ್ತು ತಾನು ಅಲ್ಲಿಯೇ ಬಂಧಿಯಾಗಿದ್ದೆ ಎಂದು ದೂರುದಾರರು ತಿಳಿಸಿದ್ದಾರೆ.
ಆಗಸ್ಟ್ 30 ರಂದು ಆ ಮಹಿಳೆಯನ್ನು ಸಿಟಿ ಮಾರ್ಕೆಟ್ ಬಳಿಯಿದ್ದ ವಕೀಲರೊಬ್ಬರ ಬಳಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯಿಂದ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ವಾಪಸ್ ಕರೆತರಲಾಯಿತು ಎಂದು ಆಕೆ ಆರೋಪಿಸಿದ್ದಾರೆ. ಮರುದಿನ ಮಧ್ಯಾಹ್ನ ಅಂದರೆ ಆಗಸ್ಟ್ 31 ರಂದು, ಶೌಚಾಲಯಕ್ಕೆ ಹೋಗಲು ರೇಷ್ಮಾ ಆಕೆಗೆ ಬಾಗಿಲು ತೆರೆದು ಹೊರಗೆ ಹೋದರು. ಮಾಹಿತಿ ಪಡೆದ ಪೊಲೀಸರು ಮನೆಗೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದರು. ನಂತರ ಆಕೆಯನ್ನು ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಕರೆತರಲಾಯಿತು. ನಜತ್ ಬೇಗಂ (A1), ರೇಷ್ಮಾ ಬಾನು (A2), ಸುಹೇಲ್ (A3) ಮತ್ತು ಸೈಫ್ (A4) ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅಪಹರಣ, ಅಕ್ರಮ ಬಂಧನ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಹಾಗೂ ಗೌಪ್ಯತೆಗೆ ಸಂಬಂಧಿಸಿದ ಐಟಿ (IT) ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.