

ಬೆಂಗಳೂರು: ರಾಜಧಾನಿಯ ಎಲ್ಲಾ ಬಿಎಂಟಿಸಿ (BMTC) ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ತುರ್ತು ಸೇವೆಗಾಗಿ ಅತ್ಯಗತ್ಯ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಬಿಎಂಟಿಸಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ರಾಮಮೂರ್ತಿನಗರದಿಂದ ಶಿವಾಜಿನಗರಕ್ಕೆ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ಬಸ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ತೀವ್ರ ಅಪಸ್ಮಾರದಿಂದ (ಫಿಟ್ಸ್) ಕುಸಿದು ಬಿದ್ದಿದ್ದರು. ಆದರೆ, ನಿಲ್ದಾಣದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕಿಟ್ ಅಥವಾ ವೈದ್ಯಕೀಯ ನೆರವು ಸಿಗಲಿಲ್ಲ.
ಚಾಲಕ ಮತ್ತು ನಿರ್ವಾಹಕರು ಹರಸಾಹಸ ಪಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಲು ಬರೋಬ್ಬರಿ 30 ನಿಮಿಷಗಳಿಗಿಂತ ಹೆಚ್ಚು ಸಮಯ ವ್ಯರ್ಥವಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಈ ಆಘಾತಕಾರಿ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತರು ಸ್ವಯಂಪ್ರೇರಿತ (Suo Motu) ಮೊಕದ್ದಮೆ ದಾಖಲಿಸಿಕೊಂಡು ಈ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಅಕ್ಟೋಬರ್ 12ರೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
ಅಪಸ್ಮಾರದಿಂದ ಬಸ್ನಲ್ಲೇ ಕುಸಿದುಬಿದ್ದಿದ್ದ ಹಿರಿಯ ನಾಗರಿಕರಿಗೆ ತಕ್ಷಣ ವೈದ್ಯಕೀಯ ನೆರವು ದೊರೆತಿರಲಿಲ್ಲ. ಅವರನ್ನು ಶಿವಾಜಿನಗರದಿಂದ ಆಸ್ಪತ್ರೆಗೆ ಕರೆದೊಯ್ಯಲು ಕೂಡ ವ್ಯವಸ್ಥೆ ಮಾಡಲಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಾಲಕ ಹಾಗೂ ನಿರ್ವಾಹಕರು ಸೇರಿ ಅವರನ್ನು ಬಸ್ನಿಂದ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲು ಸುಮಾರು 30 ನಿಮಿಷಗಳು ಬೇಕಾಯಿತು ಎಂದು ತಿಳಿಸಲಾಗಿದೆ.
ಶಾಂತಿನಗರ ಬಸ್ ನಿಲ್ದಾಣ ಹೊರತುಪಡಿಸಿ ಬಿಎಂಟಿಸಿಯ ಯಾವುದೇ ಬಸ್ ನಿಲ್ದಾಣದಲ್ಲೂ ಪ್ರಥಮ ಚಿಕಿತ್ಸಾ ಸೌಲಭ್ಯವಿಲ್ಲ ಎಂಬ ಅಂಶವೂ ವರದಿಯಿಂದ ಬೆಳಕಿಗೆ ಬಂದಿದೆ.
ಬಿಎಂಟಿಸಿ ಅಧಿಕಾರಿಗಳ ಈ ವೈಫಲ್ಯವು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ.
ಬಿಎಂಟಿಸಿ ಅಧಿಕಾರಿಗಳ ಆಡಳಿತಾತ್ಮಕ ವೈಫಲ್ಯವನ್ನು ಸರಿಪಡಿಸುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(1)ರಡಿ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಲಾಗಿದೆ.