ದುರ್ಬಲ ಮುಂಗಾರು, ಬರದ ಆತಂಕ; ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗಲ್ಲ, ಸಚಿವ ಕೆ.ಜೆ.ಜಾರ್ಜ್ ಭರವಸೆ..!

ರಾಜ್ಯವು ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಮೂಲಗಳ ಜತೆಗೆ ಸೌರ ಮತ್ತು ಪವನ ಶಕ್ತಿಯನ್ನೂ ಮೀರಿ ಬ್ಯಾಟರಿ ಸಂಗ್ರಹಣೆ, ಪಂಪ್ಡ್ ಸ್ಟೋರೇಜ್, ಹಸಿರು ಜಲಜನಕ, ಸ್ಮಾರ್ಟ್ ಸಂಚಾರ ಮತ್ತು ವಿದ್ಯುತ್ ವಾಹನಗಳತ್ತ ಗಮನ ಹರಿಸುತ್ತಿದೆ.
ಸಚಿವ ಕೆ.ಜೆ.ಜಾರ್ಜ್
ಸಚಿವ ಕೆ.ಜೆ.ಜಾರ್ಜ್
Updated on

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಹಾಗೂ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಮಂಗಳವಾರ ತಿಳಿಸಿದ್ದಾರೆ.

ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಪ್ರದರ್ಶನ-2026ರ ಬೆಂಗಳೂರಿನ ರೋಡ್‌ಶೋ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಭವಿಷ್ಯದ ವಿದ್ಯುತ್ ಬೇಡಿಕೆಯನ್ನೂ ಗಮನದಲ್ಲಿಟ್ಟುಕೊಂಡು ಸಮಗ್ರ ಯೋಜನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಳೆದ ಬೇಸಿಗೆಯಲ್ಲಿ ವಿದ್ಯುತ್ ವಿನಿಮಯ ಒಪ್ಪಂದಗಳ ಮೂಲಕ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿಸಲಾಗಿತ್ತು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ವಿದ್ಯುತ್ ಖರೀದಿಸಲಾಗುವುದು ಎಂದು ತಿಳಿಸಿದರು.

ಅಗತ್ಯವಿದ್ದರೆ ಮುಕ್ತ ಮಾರುಕಟ್ಟೆಯಿಂದಲೂ ವಿದ್ಯುತ್ ಖರೀದಿಸಲಾಗುವುದು. ಇದಕ್ಕಾಗಿ ಎಷ್ಟೇ ವೆಚ್ಚವಾದರೂ ಸರ್ಕಾರ ಭರಿಸಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ರಾಜ್ಯವು ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಮೂಲಗಳ ಜತೆಗೆ ಸೌರ ಮತ್ತು ಪವನ ಶಕ್ತಿಯನ್ನೂ ಮೀರಿ ಬ್ಯಾಟರಿ ಸಂಗ್ರಹಣೆ, ಪಂಪ್ಡ್ ಸ್ಟೋರೇಜ್, ಹಸಿರು ಜಲಜನಕ, ಸ್ಮಾರ್ಟ್ ಸಂಚಾರ ಮತ್ತು ವಿದ್ಯುತ್ ವಾಹನಗಳತ್ತ ಗಮನ ಹರಿಸುತ್ತಿದೆ. ವಿದ್ಯುತ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 12 ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 400ಕ್ಕೂ ಹೆಚ್ಚು ಉಪಕೇಂದ್ರಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಎನ್‌ಆರ್‌ಇ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ನವೀಕರಿಸಬಹುದಾದ ಇಂಧನ ಘಟಕಗಳನ್ನು 18ರಿಂದ 24 ತಿಂಗಳೊಳಗೆ ಸ್ಥಾಪಿಸಬಹುದಾದರೂ, ಅಗತ್ಯ ಪ್ರಸರಣ ಮೂಲಸೌಕರ್ಯ ನಿರ್ಮಿಸಲು 3ರಿಂದ 5 ವರ್ಷಗಳ ಕಾಲ ಬೇಕಾಗುತ್ತದೆ ಎಂದು ಹೇಳಿದರು.

ವಿದ್ಯುತ್ ಗ್ರಿಡ್‌ಗೆ ಸಂಪರ್ಕ, ಇಂಧನ ಸಂಗ್ರಹಣೆ ಹಾಗೂ ಪ್ರಸರಣ ವ್ಯವಸ್ಥೆಯ ವಿಸ್ತರಣೆ ಸೇರಿದಂತೆ ಹಲವು ಅಂಶಗಳನ್ನು ಇದರಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಸಚಿವ ಕೆ.ಜೆ.ಜಾರ್ಜ್
ವಿದ್ಯುತ್ ಬೇಡಿಕೆ ನೀಗಿಸಲು ಸರ್ಕಾರದ ಮಹತ್ವದ ಯೋಜನೆ; 2030ರ ವೇಳೆಗೆ 66 ಗಿಗಾವ್ಯಾಟ್‌ ಗುರಿ; 3 ಲಕ್ಷ ಕೋಟಿ ರೂ ಹೂಡಿಕೆ ನಿರೀಕ್ಷೆ..!

2031ರ ವೇಳೆಗೆ ಭಾರತಕ್ಕೆ ಸುಮಾರು 239 ಗಿಗಾವ್ಯಾಟ್-ಗಂಟೆ ಬ್ಯಾಟರಿ ಇಂಧನ ಸಂಗ್ರಹಣೆಯ ಅಗತ್ಯವಿದೆ. ಗರಿಷ್ಠ ವಿದ್ಯುತ್ ಬೇಡಿಕೆಯ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿಭಾಯಿಸಲು ಬ್ಯಾಟರಿ ಸಂಗ್ರಹಣೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಅನುಮತಿ ಸಿಗದಿದ್ದರೆ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಿಲ್ಲ: ಜಾರ್ಜ್

ಶಿವಮೊಗ್ಗದಲ್ಲಿ ಪ್ರಸ್ತಾಪಿಸಿರುವ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವನ್ಯಜೀವಿ ಮಂಡಳಿ ಹಾಗೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸೇರಿದಂತೆ ಅಗತ್ಯ ಸಂಸ್ಥೆಗಳಿಂದ ಅನುಮತಿ ಪಡೆಯಲಾಗುತ್ತದೆ ಎಂದು ಹೇಳಿದರು.

ಅಗತ್ಯ ಅನುಮತಿಗಳು ದೊರೆತ ನಂತರವಷ್ಟೇ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅನುಮತಿ ಸಿಗದಿದ್ದರೆ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಹಗಲಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸಂಗ್ರಹಿಸಿ ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಬಳಸಲು ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದರು.

ರಾಜ್ಯದ ಪ್ರಸ್ತುತ ವಿದ್ಯುತ್ ಬೇಡಿಕೆ ಸುಮಾರು 18,000 ಮೆಗಾವ್ಯಾಟ್ ಇದ್ದು, ಇದರಲ್ಲಿ ಶೇ.70ರಷ್ಟು ಬೇಡಿಕೆಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ನಾವು 18ನೇ ಶತಮಾನದಲ್ಲಿ ಬದುಕುತ್ತಿಲ್ಲ, 21ನೇ ಶತಮಾನದಲ್ಲಿದ್ದೇವೆ. ಈ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಪಂಪ್ಡ್ ಸ್ಟೋರೇಜ್ ಯೋಜನೆಗಳ ಅಗತ್ಯವನ್ನು ಗುರುತಿಸಿ, ಅವುಗಳ ಅನುಷ್ಠಾನದತ್ತ ನಾವು ಮುಂದುವರಿಯುತ್ತಿದ್ದೇವೆ,” ಎಂದು ಹೇಳಿದರು.

ಗೃಹಜ್ಯೋತಿ ಪರಿಶೀಲನೆ ಬಗ್ಗೆ ಸಚಿವರ ಸ್ಪಷ್ಟನೆ

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕುರಿತು ಮಾತನಾಡಿ, ಯೋಜನೆಯ ಸೌಲಭ್ಯ ಪಡೆಯಲು ಇಚ್ಛಿಸದವರು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯುವುದಿಲ್ಲ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com