

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರ ಇಂದು ಹಲವು ಹೊಸ ಯೋಜನೆಗಳು ಮತ್ತು ಉಪಕ್ರಮಗಳಿಗೆ ಚಾಲನೆ ನೀಡಿತು.
ಇದರಲ್ಲಿ ‘ಸೇವಾ ಒನ್’ ಡಿಜಿಟಲ್ ನಾಗರಿಕ ಸೇವಾ ವೇದಿಕೆ, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, BMTC 2.0 ಮೊಬೈಲ್ ಅಪ್ಲಿಕೇಶನ್ ಹಾಗೂ 5 ಲಕ್ಷ ವಸತಿ ನಿವೇಶನಗಳನ್ನು ವಿತರಿಸುವ ಯೋಜನೆ ಸೇರಿವೆ.
ಇದರ ಜತೆಗೆ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ – KSRTC ಅವತಾರ 2.0’ ನ್ನು ಸರ್ಕಾರ ಆರಂಭಿಸಿತು. ಡೀಸೆಲ್ ವಾಹನಗಳಿಗಾಗಿ ರಿಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್ (RECD) ಉಪಕ್ರಮವನ್ನು ಪರಿಚಯಿಸುವುದರ ಜೊತೆಗೆ ‘ಸೈನಿಕ ಸಮ್ಮಾನ್’ ಯೋಜನೆಯನ್ನೂ ಘೋಷಿಸಲಾಯಿತು.
ಸಿಎಂ ಡಿ ಕೆ ಶಿವಕುಮಾರ್ ಘೋಷಿಸಿದ ಹೊಸ ಯೋಜನೆಗಳೇನು?
‘ಸೇವಾ ಒನ್’ ನ್ನು ರಾಜ್ಯದ ‘ಒನ್ ಗವರ್ನ್ಮೆಂಟ್, ಒನ್ ಡಿಜಿಟಲ್’ ವೇದಿಕೆಯಾಗಿ ಪರಿಚಯಿಸಲಾಗಿದ್ದು, ಒಂದೇ ಡಿಜಿಟಲ್ ವೇದಿಕೆಯ ಮೂಲಕ ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಅಗತ್ಯಗಳನ್ನು ಸರ್ಕಾರಕ್ಕೆ ತಿಳಿಸಲು ಇದು ಸಹಕಾರಿಯಾಗಲಿದೆ.
ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ ಆರಂಭಿಸಲಾಗಿದೆ. ಸೂಕ್ತ ಸಮಯದಲ್ಲಿ, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೃಷಿ ಸಲಹೆಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಮಂಡ್ಯ, ಬೆಳಗಾವಿ, ವಿಜಯಪುರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವಿದೆ.
BMTC 2.0 ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಬಸ್ಗಳ ಸಂಚಾರವನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಬಸ್ಗಳ ಆಗಮನದ ಸಮಯ ಹಾಗೂ ಮಾರ್ಗಗಳನ್ನು ಪರಿಶೀಲಿಸುವುದು, ಡಿಜಿಟಲ್ ಮೂಲಕ ಟಿಕೆಟ್ ಖರೀದಿಸುವುದು ಮತ್ತು ವ್ಯಾಲೆಟ್ ಸೌಲಭ್ಯ ಬಳಸುವುದಕ್ಕೂ ಅವಕಾಶವಿದೆ.
ಇದಲ್ಲದೆ, ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಒಳಗೊಂಡ ಮಲ್ಟಿಮೋಡಲ್ ಜರ್ನಿ ಪ್ಲಾನರ್, ಬಿಎಂಟಿಸಿ ಮತ್ತು ನಮ್ಮ ಮೆಟ್ರೊಗೆ ಸಂಯೋಜಿತ ಟಿಕೆಟ್ ವ್ಯವಸ್ಥೆ ಹಾಗೂ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ಗಳ ಸೌಲಭ್ಯವನ್ನೂ ಆ್ಯಪ್ ಒದಗಿಸಲಿದೆ.
‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್ – ಕೆಎಸ್ ಆರ್ ಟಿಸಿ ಅವತಾರ 2.0’ ಮೂಲಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಿರ್ವಹಿಸುವ ಬಸ್ಗಳ ಟಿಕೆಟ್ಗಳನ್ನು ಆ್ಯಪ್ ಅಥವಾ ವಾಟ್ಸ್ಆ್ಯಪ್ ಮೂಲಕ ಕಾಯ್ದಿರಿಸಲು ಸಾಧ್ಯವಾಗಲಿದೆ. ಕೆಎಸ್ ಆರ್ ಟಿಸಿ ಮತ್ತು ಕೆಎಸ್ ಟಿಡಿಸಿ ಪ್ರವಾಸ ಪ್ಯಾಕೇಜ್ಗಳು ಹಾಗೂ ಡಿಜಿಟಲ್ ಮಾಸಿಕ ಪಾಸ್ಗಳ ಸೌಲಭ್ಯವೂ ಇದರಲ್ಲಿ ಇರಲಿದೆ.
ರಾಜ್ಯಾದ್ಯಂತ ಬಡವರಿಗೆ 15 ಲಕ್ಷ ಉಚಿತ ನಿವೇಶನ ಹಂಚಿಕೆ ಗುರಿ ಹೊಂದಲಾಗಿದೆ. ಪ್ರತಿ ಜಿಲ್ಲೆಯಲ್ಲಿ 50 ಸಾವಿರ ಉಚಿತ ನಿವೇಶನ ಹಂಚೋದಕ್ಕೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ಸೈಟುಗಳನ್ನು 30 ಜಿಲ್ಲೆಗೆ ಹಂಚಲಿದ್ದಾರೆ. ಎಲ್ಲಾ ಡಿಸಿಗಳಿಗೆ ಸ್ಥಳ ಗುರುತಿಸಲು ಸೂಚಿಸಲಾಗಿದೆ. ಎಸ್ಸಿ ಎಸ್ಟಿ ಓಬಿಸಿ ವರ್ಗಕ್ಕೆ ಮೊದಲ ಪ್ರಾತಿನಿಧ್ಯ ನೀಡಲಾಗುತ್ತದೆ.
ಸಮಾನ ಅವಕಾಶ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಒತ್ತು ನೀಡುವ ಸರ್ಕಾರದ ಬದ್ಧತೆಯ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.
ಮಹಿಳೆಯರ ಫ್ರೀ ಬಸ್ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್
ಸರ್ಕಾರದ ಶಕ್ತಿಯೋಜನೆಯಲ್ಲಿ ನಿತ್ಯ ಲಕ್ಷಾಂತರ ಮಹಿಳೆಯರು ಬಸ್ನಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈಗ, ಹೊಸ ಸ್ಮಾರ್ಟ್ ಕಾರ್ಡ್ ನೀಡೋದಕ್ಕೆ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ಕಾರ್ಡ್ ತೋರಿಸಿ ಮಹಿಳೆಯರು ಪ್ರಯಾಣಿಸಬಹುದಾಗಿದೆ.
ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ
ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳಚುನಾವಣೆ ನಡೆಸಲು ಸಚಿವ ಸಂಪುಟ ಅಸ್ತು ಎಂದಿದೆ.
ಕಾರ್ಮಿಕರಿಗೆ 10 ಸಾವಿರ ಮನೆ ಕಟ್ಟಿಕೊಡಲು ಪ್ಲ್ಯಾನ್
ಸರ್ಕಾರ ಕಾರ್ಮಿಕರಿಗೂ ಬಂಪರ್ ನೀಡಿದೆ. ಕೈಗಾರಿಕೆಗಳು ತಮ್ಮ ನೌಕರರು ಸಮೀಪದಲ್ಲೇ ವಾಸಿಸಲು ಮನೆಗಳನ್ನು ಕಟ್ಟಿಕೊಡಲು ಶ್ರಮಿಕ ನಿವಾಸ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ. ಉದ್ದಿಮೆಗಳು ತಮ್ಮ ನೌಕರರಿಗೆ ಮನೆ ಕಟ್ಟಿಕೊಡಲು ಕೈಗಾರಿಕೆಗಳಿಗೆ ಬಂಡವಾಳ ಸಹಾಯಧನ ನೀಡಲು ನಿರ್ಧರಿಸಲಾಗಿದೆ.
10 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆ
10 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆ ಜಾರಿಗೆ ನಿರ್ಣಯ ಕೈಕೊಳ್ಳಲಾಗಿದೆ. ಜಿಲ್ಲೆಗಳಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಸೊ ಕಂಪನಿಗಳ ಮಾಲೀಕರಿಗೆ, ಪ್ರತಿ ಉದ್ಯೋಗಿಯ ಮೇಲೆ ಮಾಸಿಕ 2,500 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.