ರಾಜ್ಯದಲ್ಲಿ ಬರದಿಂದ 18 ಸಾವಿರ ಕೋಟಿ ರೂ. ನಷ್ಟ; ಪರಿಹಾರ ಕೋರಿ ಶೀಘ್ರದಲ್ಲೇ ಕೇಂದ್ರಕ್ಕೆ ಮನವಿ: DCM ಪರಮೇಶ್ವರ್

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ನಿಯಮಗಳ ಅನ್ವಯ ವಿಪತ್ತು ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮೊದಲ ಅಧಿಕೃತ ಮನವಿ ಸಲ್ಲಿಸಲಿದೆ.
Dr G Parameshwar
ಡಾ ಜಿ ಪರಮೇಶ್ವರ್
Updated on

ಬೆಂಗಳೂರು: ಆರಂಭಿಕ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ 101 ತಾಲೂಕುಗಳಲ್ಲಿ ಬೆಳೆ ಹಾಗೂ ಆರ್ಥಿಕ ನಷ್ಟ ಒಟ್ಟಾರೆ ಅಂದಾಜು 18,000 ಕೋಟಿಯಷ್ಟಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಬುಧವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಖಾತೆಯನ್ನೂ ಹೊಂದಿರುವ ಪರಮೇಶ್ವರ್‌ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ನಿಯಮಗಳ ಅನ್ವಯ ವಿಪತ್ತು ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಮೊದಲ ಅಧಿಕೃತ ಮನವಿ ಸಲ್ಲಿಸಲಿದೆ ಎಂದು ಹೇಳಿದರು. ನಷ್ಟದ ಸಮಗ್ರ ಮೌಲ್ಯಮಾಪನ ಪೂರ್ಣಗೊಂಡಂತೆ ಹೆಚ್ಚುವರಿ ಮನವಿಗಳನ್ನೂ ಸಲ್ಲಿಸಲಾಗುವುದು ಎಂದು ತಿಳಿಸಿದರು.

2020ರ ಕೇಂದ್ರ ಸರ್ಕಾರದ ಬರ ನಿರ್ಧಾರ ಕೈಪಿಡಿಯಲ್ಲಿ ನಿಗದಿಪಡಿಸಿರುವ ಉಪಗ್ರಹ ಚಿತ್ರಗಳು, ಮಣ್ಣಿನ ತೇವಾಂಶ ಹಾಗೂ ಮಳೆ ಕೊರತೆಯ ಅವಧಿಯ ಮಾನದಂಡಗಳ ಆಧಾರದ ಮೇಲೆ 101 ತಾಲೂಕುಗಳನ್ನು ಈಗಾಗಲೇ ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾಗಿದೆ.

ಇನ್ನೂ 42 ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದ್ದು, 24 ತಾಲೂಕುಗಳಲ್ಲಿ ಪರಿಶೀಲನೆ ಪೂರ್ಣಗೊಂಡಿದೆ. ಉಳಿದ 18 ತಾಲೂಕುಗಳಲ್ಲಿ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದರು.

ಹಿಂದಿನ ಬರದ ಸಂದರ್ಭದಲ್ಲೂ ಕರ್ನಾಟಕವು ಕೇಂದ್ರದಿಂದ ಹೆಚ್ಚಿನ ನೆರವು ಕೋರಿತ್ತು. ಆದರೆ, ಸುಪ್ರೀಂ ಕೋರ್ಟ್‌ ಮೊರೆ ಹೋದ ಬಳಿಕ ಕೇವಲ 3,500 ಕೋಟಿ ರೂ. ನೆರವು ದೊರೆತಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Dr G Parameshwar
ಪರಮೇಶ್ವರ್ ಬಗ್ಗೆ ಸಿದ್ದರಾಮಯ್ಯಗೆ ವಿಶೇಷ ಅಂತಃಕರಣ; ಏನೀ ಹೊಸ ರಾಜಕೀಯ ಸಮೀಕರಣ? ಇಬ್ಬರ ಆಪ್ತತೆ ಕಂಡು ದಂಗಾಯ್ತು ರಾಜ್ಯ ರಾಜಕಾರಣ!

ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದುವರಿದು ಪ್ರಯತ್ನಿಸಲಿದೆ. ಸಾಲ ಮನ್ನಾ ಸೇರಿದಂತೆ ವಿವಿಧ ಕ್ರಮಗಳನ್ನೂ ಪರಿಗಣಿಸಲಾಗುವುದು. ಆದರೆ, ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವುದು ಮುಖ್ಯವಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟ ವಿಷಯವಾಗಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ 72,000 ಕೋಟಿ ರೂ. ಕೃಷಿ ಸಾಲವನ್ನು ಮನ್ನಾ ಮಾಡಿತ್ತು. ಇದೇ ರೀತಿಯ ಸಾಲ ಮನ್ನಾಕ್ಕಾಗಿ ರಾಜ್ಯದ ಬಿಜೆಪಿ ನಾಯಕರು, ಸಂಸದರು ಸೇರಿದಂತೆ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ನೆರವು ಪಡೆಯಲಿ ಎಂದು ಸಲಹೆ ನೀಡಿದರು.

ಈ ಹಿಂದೆ ರಾಜ್ಯ ಸರ್ಕಾರಗಳೂ ರೈತರ ಸಾಲ ಮನ್ನಾ ಮಾಡಿವೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂದು ಅವರು ಸ್ಮರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com