

ಬೆಂಗಳೂರು: ಪ್ರತಿ ತಿಂಗಳು ಜೀರೋ ಬಿಲ್ ನೋಡಿ ನಿರಾಳವಾಗುತ್ತಿದ್ದ ಜನರಿಗೆ, ಈ ಬಾರಿ ಬಂದಿರುವ ಕರೆಂಟ್ ಬಿಲ್ ನೋಡಿ ಶಾಕ್ ಹೊಡೆದಂತಾಗಿದೆ. ಯಾಕಂದ್ರೆ, ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದ ಬೆಂಗಳೂರಿನ ನೂರಾರು ಕುಟುಂಬಗಳಿಗೆ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೇ ನಾಲ್ಕರಿಂದ ಐದು ಸಾವಿರ ರೂಪಾಯಿ ಬಿಲ್ ಕೈಸೇರಿದ್ದು, ರಾಜಧಾನಿಯಲ್ಲಿ ಬೆಸ್ಕಾಂ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಈವರೆಗೆ ನಿಯಮಿತವಾಗಿ ಜೀರೋ ಬಿಲ್ ಪಡೆಯುತ್ತಿದ್ದ ಬೆಂಗಳೂರಿನ ಶಿವಾಜಿನಗರದ ಮಖಾನ್ ಕಾಂಪೌಂಡ್ ಸೇರಿದಂತೆ ಹಲವು ಭಾಗಗಳ ನಿವಾಸಿಗಳಿಗೆ, ಈ ಬಾರಿ ಇದ್ದಕ್ಕಿದ್ದಂತೆ ಬೆಸ್ಕಾಂ ನಿಂದ ₹4,000 ದಿಂದ ₹5,000 ವರೆಗಿನ ಭಾರಿ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಸಣ್ಣ ಮನೆಗಳಿಗೂ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರುವುದನ್ನು ವಿರೋಧಿಸಿ ಸ್ಥಳೀಯರು ಬೆಸ್ಕಾಂ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಉಚಿತ ಸೌಲಭ್ಯ ಸಿಗುತ್ತದೆ ಎಂದು ನಿರಾಳವಾಗಿದ್ದ ಕುಟುಂಬಗಳಿಗೆ ಏಕಾಏಕಿ ಇಷ್ಟೊಂದು ಮೊತ್ತದ ಬಿಲ್ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹಾಗಾದ್ರೆ, ಇಷ್ಟೊಂದು ದೊಡ್ಡ ಬಿಲ್ ಬರಲು ಕಾರಣವೇನು?
ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಕಳೆದ ಎರಡು ತಿಂಗಳುಗಳಿಂದ ಬಿಲ್ಲಿಂಗ್ ಸಾಫ್ಟ್ವೇರ್ ಅಥವಾ ಸರ್ವರ್ಗಳಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಉಚಿತ ಯೂನಿಟ್ಗಳು ಸರಿಯಾಗಿ ಲೆಕ್ಕಾಚಾರವಾಗದೆ ಪೂರ್ಣ ಬಿಲ್ ಜನರೇಟ್ ಆಗುತ್ತಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ, ಈ ಹಿಂದಿನ ತಿಂಗಳುಗಳಲ್ಲಿ ಜೀರೋ ಬಿಲ್ ಪಡೆಯುತ್ತಿದ್ದ ಗ್ರಾಹಕರು, ಇದು ತಾಂತ್ರಿಕ ದೋಷದಿಂದ ಬಂದಿರುವ ಬಿಲ್ ಆಗಿದೆಯೇ ಅಥವಾ ತಾವು ನಿಜವಾಗಿಯೂ ಈ ಮೊತ್ತವನ್ನು ಪಾವತಿಸಬೇಕೇ ಎಂಬ ಗೊಂದಲ ಹಾಗೂ ಆತಂಕದಲ್ಲಿದ್ದಾರೆ.